✍️: ಕೊರೋನಾ ಭಾಗ-3 ಗಂಟಲನ್ನು ಹರ್ಬಲ್ ಆ್ಯಂಟಿ ವೈರಲ್ ಕಷಾಯದಿಂದ ತೊಳೆಯೋಣ, ಸೋಂಕನ್ನೇ ಸೀಲ್ ಡೌನ್ ಮಾಡೋಣ.*

Tuesday 7 March 2023

ಪ್ರಾಣಾಯಾಮ ಅಭ್ಯಾಸಿಗಳು ಗಮನಿಸಬೇಕಾದ ಕೆಲವು ಮುಖ್ಯ ಸಂಗತಿಗಳು

*ಹೇಗೆ, ಎಲ್ಲಿ ಪ್ರಾಣಾಯಾಮ ಮಾಡಬೇಕು?: ಪ್ರಾಣಾಯಾಮ ಅಭ್ಯಾಸಿಗಳು ಗಮನಿಸಬೇಕಾದ ಕೆಲವು ಮುಖ್ಯ ಸಂಗತಿಗಳು ಇಲ್ಲಿವೆ !!!!*
 
ಪ್ರಾಣಾಯಾಮ ಅಭ್ಯಾಸಿಗಳು ಗಮನಿಸಬೇಕಾದ ಕೆಲವು ಮುಖ್ಯ ಸಂಗತಿಗಳಿವೆ.

# ನಮ್ಮ ದೇಹಪ್ರಕೃತಿಗೆ ಒಗ್ಗುವಂತಹ ಯೋಗಾಸನಗಳನ್ನು ಅಭ್ಯಾಸ ಮಾಡಿದ ಬಳಿಕವೇ ಪ್ರಾಣಾಯಾಮದ ಅಭ್ಯಾಸಕ್ಕೆ ಅರ್ಹತೆ ಲಭಿಸುತ್ತದೆ.

# ಕೆಲವೊಂದು ಪ್ರಾಣಾಯಾಮ ಪ್ರಭೇದಗಳ ಹೊರತು (ಉದಾ: ಶೀತಲೀ) ಬಹುತೇಕ ಎಲ್ಲ ಪ್ರಾಣಾಯಾಮಗಳಲ್ಲೂ ಮೂಗಿನ ಮೂಲಕವೇ ಉಸಿರಾಟ.

# ಪ್ರಾಣಾಯಾಮ ಮಾಡುವಾಗ ಕಣ್ಣುಗಳನ್ನು ಮುಚ್ಚಿಕೊಂಡರೆ ಒಳ್ಳೆಯದು. ಒಳಗಣ್ಣಿನಿಂದ ಉಸಿರಿನ ಆಗಮನ, ನಿರ್ಗಮನಗಳನ್ನು ಗಮನಿಸಲು ಇದರಿಂದ ಸುಲಭಸಾಧ್ಯ.

# ಪ್ರಾಣಾಯಾಮ ಅಭ್ಯಾಸಿ ಆಹಾರದ ಬಗ್ಗೆ ಎಚ್ಚರ ವಹಿಸಲೇಬೇಕು. ಸಾತ್ತಿ್ವಕ ಆಹಾರಕ್ಕೆ ಪ್ರಥಮ ಆದ್ಯತೆ ನೀಡಬೇಕು.

# ಪ್ರಾಣಾಯಾಮಕ್ಕಾಗಿ ಆಯ್ದುಕೊಳ್ಳುವ ಸ್ಥಳ ಪ್ರಶಾಂತವಾಗಿರಲಿ, ನಿರ್ಮಲವಾಗಿರಲಿ. ಮನೆಯಲ್ಲಿ ದೇವರ ಕೋಣೆ ಇದ್ದರೆ, ಅದರಲ್ಲೇ ಅಭ್ಯಾಸ ಮಾಡಿ. ಇಲ್ಲವೆಂದಾದರೆ, ಮನೆಮಂದಿ ಆಗಾಗ ಪ್ರವೇಶಿಸದ ಪ್ರತ್ಯೇಕ ಕೊಠಡಿಯೂ ಆಗಬಹುದು.

ಪ್ರಾಣಾಯಾಮವನ್ನು ನಿಗದಿತ ಸ್ಥಳದಲ್ಲಿ ನಿಗದಿತ ವೇಳೆಯಲ್ಲಿಯೇ ಮಾಡಿ. ಯೋಗಾಸನಗಳನ್ನು ಮಾಡುವವರು ಪ್ರಾಣಾಯಾಮಕ್ಕೆ ಇನ್ನೊಂದು ವೇಳೆಯನ್ನು ಗೊತ್ತುಮಾಡಿಕೊಳ್ಳಿ.

# ತೀರ ತಗ್ಗೂ ಅಲ್ಲದ, ತುಂಬ ಎತ್ತರವೂ ಅಲ್ಲದ ಆಸನವನ್ನು ಮಾಡಿಕೊಳ್ಳಬೇಕು. ಬರಿ ನೆಲದಲ್ಲಿ ಪ್ರಾಣಾಯಾಮ ಮಾಡಬಾರದು.

# ಬೆನ್ನು ಬಾಗಿಸದೆ ನೇರವಾಗಿ ಕುಳಿತುಕೊಳ್ಳಬೇಕು. ಬೆನ್ನು ಬಾಗಿಸಿ ಕುಳಿತರೆ ನಾಡಿ, ಚಕ್ರಗಳಲ್ಲಿನ ಪ್ರಾಣಶಕ್ತಿಯ ಸಂಚಾರಕ್ಕೆ ತಡೆಯಾಗಿ ಸಾಧಕ ರೋಗಕ್ಕೆ ತುತ್ತಾಗಬಹುದು.

# ಪ್ರಾಣಾಯಾಮ ಆರಂಭಿಸುವವರಿಗಾಗಿಯೇ ಪ್ರಾಥಮಿಕ ಪ್ರಾಣಾಯಾಮ ಕ್ರಮಗಳಿವೆ. ನಾಡಿಗಳ ಶುದ್ಧಿಗಾಗಿ ಇರುವ ಕಪಾಲ ಭಾತಿ ಕ್ರಿಯೆ, ಅನುಲೋಮ-ವಿಲೋಮ, ಭ್ರಾಮರೀ, ಶೀತ್ಕಾರೀ ಅಥವಾ ಶೀತಕಾರೀ ಮತ್ತು ಶೀತಲೀ. ಕಪಾಲಭಾತಿ ಮತ್ತು ಅನುಲೋಮ ವಿಲೋಮಗಳು ಪ್ರಾಣಾಯಾಮದ ಅಭ್ಯಾಸಕ್ಕೆ ಬೆನ್ನುಲುಬಿನಂತೆ.

# ಪ್ರಾಥಮಿಕ ಹಂತವನ್ನು ಕರಗತ ಮಾಡಿಕೊಂಡವರಿಗಾಗಿ (ಅಂದರೆ, ಅಂತಹ ಪ್ರಾಣಾಯಾಮಗಳನ್ನು ಕೆಲವು ತಿಂಗಳು ಅಭ್ಯಾಸ ಮಾಡಿದವರಿಗಾಗಿ) ಇರುವ ಪ್ರಾಣಾಯಾಮಗಳು ಉಜ್ಜಾಯೀ, ಸೂರ್ಯಭೇದನ, ಚಂದ್ರಭೇದನ, ಭಸ್ತ್ರಿಕಾ ಹಾಗೂ ಸಮನು. ಈ ಪ್ರೌಢಹಂತದ ಪ್ರಾಣಾಯಾಮ ಅಭ್ಯಾಸಕ್ರಮಗಳು ಕುಂಡಲಿನೀ ಶಕ್ತಿಯನ್ನು (ಪ್ರಾಣದ ಸೂಕ್ಷ್ಮರೂಪ) ಜಾಗೃತಗೊಳಿಸುವುದಕ್ಕಾಗಿ ಇವೆ. ಈ ಹಂತವನ್ನು ಪ್ರವೇಶಿಸಬಯಸುವ ಸಾಧಕನಲ್ಲಿ ದೈಹಿಕವಾಗಿ, ಮಾನಸಿಕವಾಗಿ, ಆಧ್ಯಾತ್ಮಿಕವಾಗಿ ವಿಶಿಷ್ಟವಾಗಿ ಸಿದ್ಧತೆಯೊಂದು ಬೇಕಾಗುತ್ತದೆ.

# ಈ ಮುಂದುವರಿದ ಹಂತದ ಪ್ರಾಣಾಯಾಮ ಕ್ರಮಗಳನ್ನು ಅಭ್ಯಾಸ ಮಾಡಬೇಕೆಂದಿರುವವರು, ಈ ಕ್ರಮಗಳ ಮೂಲಕ ನಮ್ಮ ಶರೀರದಲ್ಲಿ ಉತ್ಪಾದಿತವಾಗುವ ಪ್ರಾಣಶಕ್ತಿಯನ್ನು ಸಂರಕ್ಷಿಸಿಕೊಂಡು ಬಳಸಲು ಸಹಾಯಕವಾಗುವಂತಹ ಮೂರು ಬಂಧಗಳನ್ನು (ಜಾಲಂಧರ ಬಂಧ, ಉಡ್ಡೀಯಾನ ಬಂಧ ಹಾಗೂ ಮೂಲಬಂಧ) ಹಾಕಲು ಕಲಿತುಕೊಳ್ಳಬೇಕು.

# ಪ್ರಾಣಾಯಾಮವನ್ನು ಶಾಂತ ಮನಸ್ಸಿನಿಂದ, ಅಂದರೆ ಅವಸರ, ಉದ್ವೇಗಗಳಿಲ್ಲದೆ ನಿಧಾನವಾಗಿ ಮಾಡಬೇಕು. ಶ್ವಾಸಕೋಶದಲ್ಲಿ ತೊಂದರೆ ಇದ್ದಾಗ, ನೋವು ಇದ್ದಾಗ ಉಸಿರಾಟಕ್ಕೆ ತೊಡಕಿದ್ದಾಗ ಪ್ರಾಣಾಯಾಮ ಮಾಡಬಾರದೆಂಬುದು ಸ್ವಾಮಿ ಶಿವಾನಂದ ಮತ್ತು ಬಿ.ಕೆ.ಎಸ್. ಅಯ್ಯಂಗಾರ್​ರ ಅವರಂತಹ ಯೋಗಪಟುಗಳ ಕಿವಿಮಾತು.

# ಪ್ರಾಣಾಯಾಮಕ್ಕೆ ಸಂಬಂಧಿಸಿದಂತೆ ಸ್ತ್ರೀಯರಿಗೆ ಕೆಲವೊಂದು ವಿಧಿ, ನಿಷೇಧಗಳನ್ನು ಹೇಳಲಾಗಿದೆ. ಗರ್ಭಿಣಿಯರಿಗೆ ಕಪಾಲಭಾತಿ, ಭಸ್ತ್ರಿಕಾ, ಅಂತರಕುಂಭಕ, ಉಡ್ಡೀಯಾನ ಸಹಿತ ಬಾಹ್ಯ ಕುಂಭಕ ನಿಷೇಧ.

# ಎಲ್ಲಕ್ಕಿಂತ ಮುಖ್ಯವಾದ ಅಂಶವೆಂದರೆ ಈ ಯಾವ ಪ್ರಾಣಾಯಾಮಗಳನ್ನು ಯೋಗ/ಪ್ರಾಣಾಯಾಮ ಶಿಕ್ಷಕ ಅಥವಾ ಗುರುಗಳ ಮಾರ್ಗದರ್ಶನವಿಲ್ಲದೆ ಮಾಡಲೇಬಾರದು.

📖
🙏🙏🙏🙏 ಜೈ ಹಿಂದ್🌺

*ಮಾಹಿತಿ ಸಂಗ್ರಹ*
* ಹೆಚ್.ಬಿ.ಮೇಟಿ*
*ಶಿಕ್ಷಕ್ರು . ಜಿ.ಹೆಚ್.ಎಸ್ ಗೊಜನೂರ

No comments:

Post a Comment

MATHS TIME LINE

MATHS TIME LINE https://mathigon.org/timeline