✍️: ಕೊರೋನಾ ಭಾಗ-3 ಗಂಟಲನ್ನು ಹರ್ಬಲ್ ಆ್ಯಂಟಿ ವೈರಲ್ ಕಷಾಯದಿಂದ ತೊಳೆಯೋಣ, ಸೋಂಕನ್ನೇ ಸೀಲ್ ಡೌನ್ ಮಾಡೋಣ.*

Sunday, 12 October 2025

Income Tax Refund: ಆದಾಯ ತೆರಿಗೆ ರಿಫಂಡ್ ವಿಳಂಬಕ್ಕೆ 8 ಕಾರಣಗಳೇನು? ಸಮಸ್ಯೆ ನಿವಾರಣೆಗೆ ಏನು ಮಾಡಬಹುದು? ಇಲ್ಲಿದೆ ಟಿಪ್ಸ್


Income Tax Refund: ಆದಾಯ ತೆರಿಗೆ ರಿಫಂಡ್ ವಿಳಂಬಕ್ಕೆ 8 ಕಾರಣಗಳೇನು? ಸಮಸ್ಯೆ ನಿವಾರಣೆಗೆ ಏನು ಮಾಡಬಹುದು? ಇಲ್ಲಿದೆ ಮಾಹಿತಿ.



ಆದಾಯ ತೆರಿಗೆ ರಿಟರ್ನ್ ಸಲ್ಲಿಸುವುದು ಈಗ ತುಂಬ ಸುಲಭವಾಗಿದೆ. ಎಲ್ಲ ಪ್ರಕ್ರಿಯೆಗಳು ಕೂಡ ಆನ್‌ಲೈನ್‌ನಲ್ಲೇ ಮುಗಿಯುತ್ತವೆ. ಹಾಗಾಗಿ, ರಿಟರ್ನ್ ಸಲ್ಲಿಸಿದ ಬಳಿಕ ಎಲ್ಲ ದಾಖಲೆಗಳು ಸರಿಯಾಗಿದ್ದರೆ ಕೆಲವೇ ನಿಮಿಷಗಳಲ್ಲಿ ರಿಫಂಡ್ ಆಗುತ್ತದೆ. ಹೀಗಿದ್ದರೂ, ಕೆಲವೊಮ್ಮೆ ಆದಾಯ ತೆರಿಗೆ ರಿಫಂಡ್ ವಿಳಂಬವಾಗುತ್ತದೆ. ಹಾಗಾದರೆ, ರಿಫಂಡ್ ವಿಳಂಬವಾಗಲು ಕಾರಣಗಳೇನು? ರಿಫಂಡ್ ಸಲ್ಲಿಸಿದ ಬಳಿಕ ಏನೆಲ್ಲ ಮಾಡಬೇಕು? ಮುಂದೆ ಓದಿ.

ಚಾರ್ಟರ್ಡ್ ಅಕೌಂಟೆಂಟ್ ಲೆಕ್ಕಪುಸ್ತಕಗಳ ಆಡಿಟ್‌ಗಳು ಇಲ್ಲದವರಿಗೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಗಡುವು ಈಗಾಗಲೇ ಮುಗಿದಿದೆ. ದಾಖಲೆ ಪ್ರಮಾಣದಲ್ಲಿ ರಿಟರ್ನ್ ಸಲ್ಲಿಕೆಯಾಗಿರುವುದು ಆರೋಗ್ಯಕರವಾದ ಆರ್ಥಿಕ ವ್ಯವಸ್ಥೆಯನ್ನು ಸೂಚಿಸುತ್ತದೆ.

ನಿಮ್ಮ ಆದಾಯವು ತೆರಿಗೆ ವ್ಯಾಪ್ತಿಯಲ್ಲಿ ಇದ್ದರೆ ಆದಾಯ ತೆರಿಗೆಯನ್ನು ಮೂಲದಲ್ಲಿಯೇ ಹಿಡಿದು ಅಥವಾ ಮುಂಗಡವಾಗಿಯೇ?' ತೆರಿಗೆಯನ್ನು ಸರಕಾರದ ಖಾತೆಗೆ ಪಾವತಿಸಬೇಕು, ಆದಾಯ ಮತ್ತು ಅದರ ತೆರಿಗೆಯನ್ನು ಅಕ್ಕಹಾಕಿ ಬಾಕಿ ತೆರಿಗೆ ಪಾವತಿಸಬೇಕಾಗಿ ಬಂದಲ್ಲಿ ಅದನ್ನು ಪಾವತಿಸಿದ ನಂತರವೇ ರಿಟರ್ನ್ಸ್ ಸಲ್ಲಿಸಬೇಕು. ಎನ್ನುವುದು ನಿಯತು. ಕೆಲವು ಸನ್ನಿವೇಶಗಳಲ್ಲಿ ತೆರಿಗೆಯನ್ನು ಹೆಚ್ಚಾಗಿ ಪಾವತಿಸಿದ್ದರೆ ರಿಟರ್ನ್ಸ್ ಸಲ್ಲಿಸಿದ ಬಳಿಕ ಆದಾಯ ತೆರಿಗೆ ಇಲಾಖೆಯಿಂದ ತೆರಿಗೆ ರಿಫಂಡ್ (ತೆರಿಗೆ ಮರುಪಾವತಿ) ಪಡೆಯಬಹುದು.

ಇತ್ತೀಚಿನ ವರ್ಷಗಳಲ್ಲಿ ರಿಟರ್ನ್ ಸಲ್ಲಿಸುವುದು ತಂತಜ್ಞಾನದ ಅಳವಡಿಕೆಯಿಂದ ಆನ್ಲೈನ್ ಆಗಿರುವುದರಿಂದ ಸುಲಭವಾಗಿದೆ.

ತೆರಿಗೆ ಇಲಾಖೆಯಿಂದ ರಿಟರ್ನ್ಗಳು ವೇಗವಾಗಿ ಸಂಸ್ಕರಣೆಗೊಂಡು ತೆರಿಗೆ ರಿಫಂಡ್ (ತೆರಿಗೆ ಮರುಪಾವತಿ) ಹಲವು ಸಂದರ್ಭಗಳಲ್ಲಿ ಕೆಲವೇ ನಿಮಿಷಗಳಲ್ಲಿ ತೆರಿಗೆದಾರರ ಬ್ಯಾಂಕ್ ಖಾತೆಗೆ ಜಮಾ ಆಗಿರುವ ನಿದರ್ಶನಗಳಿವೆ. ಹೀಗಿದ್ದರೂ ಕೆಲವೊಮ್ಮೆ ತೆರಿಗೆ ರಿಫಂಡ್ ವಿಳಂಬವಾಗುವುದನ್ನು ಕೇಳಿದ್ದೇವೆ. ಇದಕ್ಕೆ ಹಲವು ಕಾರಣಗಳಿವೆ. 

1. ಪರಿಶೀಲನೆ (Verification) ಮರೆಯುವುದು:

ಹಿಂದಲ್ಲ ಪುಟಗಟ್ಟಲೇ ರಿಟರ್ನ್ ಸಲ್ಲಿಸುತ್ತಿದ್ದ ಕಾಲದಲ್ಲಿ ರಿಟರ್ನ್ ಬರೆದು ಕಡೆಯಲ್ಲಿ ರಿಟರ್ನ್(Verification) ಪರಿಶೀಲನೆ ಮಾಡಲು ತೆರಿಗೆದಾರರು ಸಹಿ ಮಾಡಿ,ರಿಟರ್ನ್ ದೃಢಿಕರಿಸಿ ಆದಾಯ ತೆರಿಗೆ ಕಚೇರಿಗೆ ಸಲ್ಲಿಸುತ್ತಿದ್ದರು.

ಆದ್ರೆ ಬದಲಾದ ಸನ್ನಿವೇಶದಲ್ಲಿ ಆನ್ಲೈನ್ ಮೂಲಕ ರಿಟರ್ನ್ ಸಲ್ಲಿಸುವ ಇಂದಿನ ಪರಿಸ್ಥಿತಿಯಲ್ಲಿ ಪರಿಶೀಲನೆಯು ಣುಕ ಮೂಲಕ ಆಗುತ್ತದೆ. ಈಗಿರುವ ನಿಯಮಾವಳಿಗಳ ಪ್ರಕಾರ ಆನ್ ಲೈನ್ ಮೂಲಕ ರಿಟರ್ನ್ ಸಲ್ಲಿಸಿದ 30 ದಿನಗಳೊಳಗೆ ಪರಿಶೀಲಿಸ ಬೇಕು. ಇಲ್ಲದಿದ್ದರೆ ಅಂತಹ ರಿಟರ್ನ್‌ಗಳನ್ನು ತೆರಿಗೆ ಇಲಾಖೆ ಸಂಸ್ಕರಿಸುವುದಿಲ್ಲ. ತೆರಿಗೆದಾರರು ರಿಟರ್ನ್ ಸಲ್ಲಿಸಿದ ಬಳಿಕ ಪರಿಶೀಲಿಸುವುದನ್ನು ನಿರ್ಲಕ್ಷಿಸುವುದರಿಂದ ಮರುಪಾವತಿಯು ಬ್ಯಾಂಕ್ ಖಾತೆಗೆ ಜಮಾ ಆಗದೆ ಇರುವುದಕ್ಕೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. 30 ದಿನಗಳೊಳಗೆ ಪರಿಶೀಲನಗೊಳ್ಳದ ರಿಟರ್ನ್ ಅಮಾನ್ಯವಾಗುವುದಲ್ಲದೆ, ರಿಟರ್ನ್ ಸಲ್ಲಿಸಿಯೇ ಇಲ್ಲವೆಂದು ನಿಯಮಾವಳಿಗಳ ಪ್ರಕಾರ ಪರಿಗಣಸಲಾಗುತ್ತದೆ.

2. ಸರಿಯಾದ ಬ್ಯಾಂಕ್ ಖಾತೆ ವಿವರ ನೀಡದಿರುವುದು:

ರಿಫಂಡ್ ಮೊತ್ತವು ಈಗ ನೇರವಾಗಿ ಬ್ಯಾಂಕ್ ಖಾತೆಗೆ ಜಮೆಯಾಗುವುದರಿಂದ ರಿಟರ್ನ್ ಸಲ್ಲಿಸುವಾಗ ಪ್ರೊಫೈಲ್ ನಲ್ಲಿ ಸರಿಯಾದ ಬ್ಯಾಂಕ್ ಖಾತೆಯ ವಿವರಗಳನ್ನು ನೀಡುವುದು ಕಡ್ಡಾಯ, ಬ್ಯಾಂಕ್ ಖಾತೆ ಸಂಖ್ಯೆ, IFSC ಸಂಖ್ಯೆ ಮತ್ತು ಬ್ಯಾಂಕ್‌ನ ಹೆಸರು ತಪ್ಪಾಗಿ ನಮೂದಿಸಿದ್ದರೆ ರಿಫಂಡ್ ಜಮೆಯಾಗುವುದಿಲ್ಲ ಈ ಪ್ರಕ್ರಿಯೆಯನ್ನು ಸುಗಮಗೊಳಿಸಲು ಅಮಾನ್ಯಗೊಂಡ ಬ್ಯಾಂಕ್ ಖಾತೆಯ ವಿವರಗಳನ್ನು ಸಲ್ಲಿಸಬಾರದು.

ಕೆಲವೊಮ್ಮೆ ಎರಡು ಬ್ಯಾಂಕ್ ವಿಲೀನಗೊಂಡಿದ್ದರೆ, ಹೊಸ ಖಾತೆಯ ವಿವರಗಳನ್ನು ಪ್ರೊಫೈಲ್ ನಲ್ಲಿ ನಮೂದಿಸುವುದು ಸೂಕ್ತ. ಇತ್ತೀಚಿನ ದಿನಗಳಲ್ಲಿ ಆದಾಯ ತೆರಿಗೆ ಇಲಾಖೆ ಪೂರ್ವ-ದೃಢಿಕರಿಸಿದ ಬ್ಯಾಂಕ್ ಖಾತೆಗೆ ಮಾತ್ರ ತೆರಿಗೆ ರಿಫಂಡ್ ಜಮೆ ಮಾಡಲಾಗುತ್ತದೆ. ನಿಮ್ಮ ಬ್ಯಾಂಕ್ ಹಾಳೆ ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಪೂರ್ವ-ದೃಢೀಕರಿಸಿವೆಯೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ನಿಮ್ಮ ಪ್ಯಾನ್ ಕಾರ್ಡ್ ಜತೆ ಜೋಡಣೆ ಯಾಗಿರಬೇಕು. ಅದರ ಸ್ಟೇಟಸ್ Validated ಎಂದು ಇರಬೇಕು. ಈ ಪ್ರಕ್ರಿಯೆ ಇಲ್ಲದಿದ್ದರೆ ರಿಫಂಡ್ ಜಮೆಯಾಗುವುದಿಲ್ಲ.

3. ತಾಳೆಯಾಗದ ಆದಾಯ ಮತ್ತು ತೆರಿಗೆ ಪಾವತಿ:

ರಿಟರ್ನ್ ಸಲ್ಲಿಸುವ ಪ್ರಮುಖ ಉದ್ದೇಶವೇ ಗಳಿಸಿರುವ ಆದಾಯ ಮತ್ತು ಅದರ ಮೇಲಿನ ತೆರಿಗೆ ಪಾವತಿಯ ವಿವರಗಳನ್ನು ದೃಡೀಕರಿಸಿ, ತೆರಿಗೆ ಪಾವತಿ ಆಥವಾ ರಿಫಂಡ್ ಪಡೆಯುವುದು.

ರಿಟರ್ನ್ ಸಲ್ಲಿಸುವುದಕ್ಕಿಂತ ಪೂರ್ವದಲ್ಲಿಯೇ ಫಾರ್ಮ್-26 AS Annual Information Statement (ಈ ಎರಡು ವಿವರಣಾ ಪಟ್ಟಿಯು ಆದಾಯ ತೆರಿಗೆ ಜಾಲತಾಣದ ನಮ್ಮ ಪ್ರೊಫೈಲ್‌ನಲ್ಲಿ ಇಡೀ ಹಣಕಾಸು ವರ್ಷದಲ್ಲಿ ನಾವು ಗಳಿಸಿರುವ, ಹೂಡಿಕೆ ಮಾಡಿರುವ ತೆರಿಗೆ ಪಾವತಿಮಾಡಿರುವ ವಿವರಗಳು ನಮ್ಮ ಪ್ಯಾನ್ ಸಂಖ್ಯೆಯ ಆಧಾರದ ಮೇಲೆ ದೊರೆಯುತ್ತದೆ) ಮತ್ತು ನಾವು ನಮೂದಿಸುತ್ತಿರುವ ವಿವರಗಳು ತಾಳೆ ಹೊಂದುತ್ತವೆಯೇ ಎಂಬುದನ್ನು ಖಚಿತಪಡಿಸಿಕೊಂಡ ಬಳಿಕವೇ ರಿಟರ್ನ್ ಸಲ್ಲಿಸಬೇಕು. ಒಂದು ಪಕ್ಷ ಈ ಮೂರು ತಾಳೆಯಾಗದಿದ್ದರೆ ತೆರಿಗೆ ರಿಫಂಡ್ ಖಾತೆಗೆ ಜಮೆಯಾಗದೆ ವಿಳಂಬವಾಗುವುದು.

4. ಹಿಂದಿನ ವರ್ಷಗಳ ಬಾಕಿ ತೆರಿಗೆ ಬೇಡಿಕೆಗಳು (Outstanding Tax Demands):

ಹಿಂದಿನ ಹಣಕಾಸು ವರ್ಷಗಳ ತೆಂಗೆ ಬೇಡಿಕೆಗಳು ಉಳಿದುಕೊಂಡಿದ್ದರೆ ಅಥವಾ ಬಾಕಿ ತೆರಿಗೆಗಳನ್ನು ಪಾವತಿಸದಿದ್ದರೆ ಈ ಸಂದರ್ಭಗಳಲ್ಲಿ ಪ್ರಸ್ತುತ ವರ್ಷದ ತೆರಿಗೆ ರಿಫಂಡ್‌ ನ್ನು ಬಾಕಿ ಇರುವ ಬೇಡಿಕೆ ಮೊತ್ತಗಳಿಗೆ ಹೊಂದಿಸಿಲಾಗುತ್ತದೆ. ಹೀಗೆ ಮಾಡಿದಾಗ, ಕಡಿಮೆ ತೆರಿಗೆ ರಿಫಂಡ್ ಜಮಾ ಆಗಬಹುದು ಅಥವಾ ಯಾವುದೇ ಮರುಪಾವತಿ ದೊರೆಯದಿರಬಹುದು.

5. ಸಲ್ಲಿಸಿದ ರಿಟರ್ನ್‌ಗಳಲ್ಲಿನ ಲೋಪದೋಷಗಳು:

ಆದಾಯವನ್ನು ಸರಿಯಾಗಿ ನಮೂದಿಸದಿದ್ದರೆ ಅಥವಾ ಸರಿಯಾದ ತೆರಿಗೆ ಕಡಿತಗಳನ್ನು (Deductions) ತೋರಿಸದಿದ್ದರೆ ಆದಾಯ ತೆರಿಗೆ ಇಲಾಖೆ ನಿಮ್ಮ ರಿಟರ್ನ್ ಅನ್ನು ಸಂಸ್ಕರಿಸುವಾಗ ಹೆಚ್ಚು ತೆರಿಗೆ ಬಾಕಿ ಇದೆ ಎಂದು ನಿರ್ಧರಿಸಬಹುದು. ಹೀಗಾಗಿ ನಿಮ್ಮ ಪ್ರಕಾರದ ತೆರಿಗೆ ರಿಫಂಡ್ ಜಮೆಯಾಗದೆ ಇರಬಹುದು.

6. ಕರನಿರ್ಧಾರಣ ಪ್ರಕ್ರಿಯೆಗೆ (Scrutiny) ಒಳಪಡುವುದು:

ಆದಾಯ ತೆರಿಗೆ ಇಲಾಖೆ ಕೆಲವೊಮ್ಮೆ ಕೆಲವು ರಿಟರ್ನ್‌ಗಳನ್ನು ಆಯ್ದುಕೊಂಡು ಕರನಿರ್ಧಾರಣ ಕ್ರಿಯೆಗೆ (ಟ್ಯಾಕ್ಸ್ ಅಸೆಸ್ ಮೆಂಟ್) ಒಳಪಡಿಸುತ್ತದೆ. ಇದು ಸಾಮಾನ್ಯವಾಗಿ ಹೆಚ್ಚಿನ ಮೊತ್ತದ ತೆರಿಗೆ ರಿಫಂಡ್‌ ಗಳು ಇದ್ದಾಗ ಅಥವಾ ಆದಾಯ ಮತ್ತು ಹೂಡಿಕೆಗಳಲ್ಲಿ ದೊಡ್ಡ ವ್ಯತ್ಯಾಸಗಳಿದ್ದಾಗ ಆಗುವ ಪ್ರಕ್ರಿಯೆ, ಪ್ರತಿವರ್ಷ ಆದಾಯ ತೆರಿಗೆ ಇಲಾಖೆ ಕರನಿರ್ಧಾರಣ ನಿಯಮಾವಳಿಗಳನ್ನು ರೂಪಿಸಿ ಯಾವುದೇ ರಿಟರ್ನ್ ಈ ನಿಯಮಾವಳಿಗಳ ಅಡಿಯಲ್ಲಿ ಬಂದರೆ, ರಿಟರ್ನ್ ಸಂಸ್ಕರಣೆ ಪ್ರಕ್ರಿಯೆಯಲ್ಲಿ ಸಾಕಷ್ಟು ಸಮಯ ಹಿಡಿಯುತ್ತದೆ. ಇದು ಪೂರ್ಣಗೊಂಡ ನಂತರದೇ ರಿಫಂಡ್ ಖಾತೆಗೆ ಜಮೆಯಾಗುತ್ತದೆ.

7. ದೊಡ್ಡ ಮೊತ್ತದ ತೆರಿಗೆ ರಿಫಂಡ್‌ ಗಳು:

ದೊಡ್ಡ ಮೊತ್ತದ ರಿಫಂಡ್‌ಗಳ ರಿಟರ್ನ್‌ಗಳನ್ನು ತೆರಿಗೆ ಇಲಾಖೆಯು ಪರಿಶೀಲಿಸುತ್ತದೆ. ಇಂತಹ ಪ್ರಕರಣದಲ್ಲಿ ಕರನಿರ್ಧಾರಣ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಕೈಗೊಳ್ಳುವ ಸಾಧ್ಯತೆ ಹೆಚ್ಚು ಹಾಗಾಗಿ, ಸಹಜವಾಗಿಯೇ ರಿಫಂಡ್ ಖಾತೆಗೆ ಜಮಾಗೊಳ್ಳಲು ವಿಳಂಬವಾಗಬಹುದು.

 8. ಐಟಿ ಜಾಲತಾಣದಲ್ಲಿನ ತಾಂತ್ರಿಕ ದೋಷಗಳು:

ತೆರಿಗೆ ಇಲಾಖೆಯ ಸಂಸ್ಕರಣಾ ವ್ಯವಸ್ಥೆಗಳಲ್ಲಿ ಕೆಲವೊಮ್ಮೆ ತಾಂತ್ರಿಕ ದೋಷಗಳು ಅಥವಾ ಸಿಸ್ಟಮ್ ದೋಷಗಳು ತೆರಿಗೆ ರಿಫಂಡ್ ವಿತರಣೆಯಲ್ಲಿ ವಿಳಂಬಕ್ಕೆ ಕಾರಣವಾಗಬಹುದು.

ಸಮಸ್ಯೆ ನಿವಾರಣೆಗೆ ಏನು ಮಾಡಬಹುದು?

▪️ಮೊದಲು ಸಮಸ್ಯೆ ಏನಾಗಿದೆ ಎಂದು ಅರಿಯಲು ರಿಟರ್ನ್ ಸಲ್ಲಿಸಿದ ಬಳಿಕ ಇ-ಮೇಲ್ ಮತ್ತು ಮೊಬೈಲ್ಗೆ ಆದಾಯ ತೆರಿಗೆ ಇಲಾಖೆಯಿಂದ ಮಾಹಿತಿ ಬಂದಿರುವುದನ್ನು ಗಮನಿಸಬೇಕು ಮತ್ತು ಆ ಮಾಹಿತಿ ಅನ್ವಯ ನಡೆದುಕೊಳ್ಳಬೇಕು.

▪️ಆದಾಯ ತೆರಿಗೆ ಇ-ಫೈಲಿಂಗ್ ಜಾಲತಾಣದಲ್ಲಿ ನಿಮ್ಮ ರಿಟರ್ನ್ ಸ್ಟೇಟಸ್‌ ನ್ನು ಕಾಲಕಾಲಕ್ಕೆ ಪರಿಶೀಲಿಸುತ್ತಿರಬೇಕು. ಬ್ಯಾಂಕ್ ಖಾತೆಯ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ ಮತ್ತು ಅಗತ್ಯವಿದ್ದರೆ ಮತ್ತೊಮ್ಮೆ ದೃಢೀಕರಿಸಬೇಕು.

▪️ಯಾವುದೇ ಬಾಕಿ ತೆರಿಗೆ ಬೇಡಿಕೆಗಳಿದ್ದರೆ, ಅವುಗಳನ್ನು ಪಾವತಿಸಿ ಅಥವಾ ಆದಾಯ ತೆರಿಗೆ ಇಲಾಖೆಗೆ ಪ್ರತಿಕ್ರಿಯೆ ನೀಡುವುದು ಸೂಕ್ತ. ಸಮಸ್ಯೆ ಬಗೆಹರಿಯದಿದ್ದರೆ, ಆದಾಯ ತೆರಿಗೆ ಇಲಾಖೆಯ ಅಧಿಕೃತ ಸಹಾಯವಾಣಿ ಸಂಪರ್ಕಿಸಿ.

Saturday, 15 March 2025

ನೆನಪಿಸಿಕೊಳ್ಳುವ ಹಂತಗಳ ವೈಜ್ಞಾನಿಕ ವಿಶ್ಲೇಷಣೆ......

ನೆನಪಿರಿಸಿಕೊಳ್ಳುವ ಹಂತಗಳು

" ಓದಿದ್ದು ನಿನ್ನೆ ಅಷ್ಟು ಚೆನ್ನಾಗಿ ನೆನಪಿತ್ತು. ಈಗ ನೆನಪಿಗೆ ಬರುತ್ತಿಲ್ಲ" ಎಂದು ಚಿಂತಿತರಾಗುವ ಹಲವು ವಿದ್ಯಾರ್ಥಿಗಳಿರುತ್ತಾರೆ. ಯಾಕೆ ಹೀಗಾಗುತ್ತದೆ ಎನ್ನುವುದು ಗೊತ್ತಾಗಬೇಕಾದರೆ ನೆನಪಿರಿಸಿಕೊಳ್ಳುವ ವೈಜ್ಞಾನಿಕ ಪ್ರಕ್ರಿಯೆ ಯಾವ ರೀತಿ ನಡೆಯುತ್ತದೆ ಎಂದು ತಿಳಿದುಕೊಳ್ಳಬೇಕು.

ನೆನಪಿರಿಸಿಕೊಳ್ಳುವ ವೈಜ್ಞಾನಿಕ ಪ್ರಕ್ರಿಯೆ:

* ನರವ್ಯೂಹದಲ್ಲಿ ಕೋಟ್ಯಂತರ ನರ ಕೋಶಗಳು ಇರುತ್ತವೆ.
* ನರ ಕೋಶಗಳು ಸಂಪರ್ಕ ತಂತುವಿನಿಂದ ಒಂದಕ್ಕೊಂದು ಬೆಸೆದುಕೊಂಡಿರುತ್ತವೆ.
* ಪ್ರತಿಯೊಂದು ವಿಷಯದ ಕುರಿತ ನಮ್ಮ ತಿಳಿವಳಿಕೆ ಒಂದು ಗಣದ ನರಕೋಶಗಳನ್ನು, ರಾಸಾಯನಿಕ ಸ್ರಾವದ ಮೂಲಕ ಉದ್ದೀಪಿಸುತ್ತದೆ.
* ಉದ್ದೀಪನ ಕ್ರಿಯೆಯು ತಾತ್ಕಾಲಿಕ ಮತ್ತು ದೀರ್ಘ ಕಾಲಿಕ ಎಂಬ ಎರಡು ಹಂತಗಳಲ್ಲಿ ನಡೆಯುತ್ತದೆ.
* ತಾತ್ಕಾಲಿಕ ಉದ್ದೀಪನವು ಬೇಗನೆ ಮರೆತು ಹೋಗುತ್ತದೆ. ತಾತ್ಕಾಲಿಕ ಉದ್ದೀಪನಕ್ಕೆ ಒಳಗಾದ ನರಕೋಶಗಳನ್ನು ಮತ್ತೆ ಮತ್ತೆ ಉದ್ದೀಪಿಸಿದಾಗ ದೀರ್ಘ ಕಾಲಿಕವಾಗಿ ನೆನಪಿನಲ್ಲಿ ದಾಖಲಾಗುತ್ತದೆ.
* ಕೆಲವೊಂದು ಪಠ್ಯ ವಿಷಯಗಳ ಕಂಠಪಾಠ, ಪುನರಾವರ್ತನೆ, ವಿಚಾರ ವಿನಿಮಯ, ವಿಚಾರ ಮಂಡನೆ, ಬೋಧನೆ, ಗುಂಪು ಚರ್ಚೆ, ವಿಚಾರ ಸಂಕಿರಣಗಳೆಲ್ಲವೂ ತಾತ್ಕಾಲಿಕ ಉದ್ದೀಪನವನ್ನು ಮತ್ತೆ ಮತ್ತೆ ಉದ್ದೀಪಿಸಿ ದೀರ್ಘಕಾಲಿಕವಾಗಿ ದಾಖಲಿಸುವ ಪ್ರಕ್ರಿಯೆಯಾಗಿದೆ.
* ಹೊಸ ಮಾಹಿತಿಯನ್ನು ಈಗಾಗಲೇ ಸ್ಥಾಪಿತವಾಗಿರುವ ನರಕೋಶಗಳ ಗಣಕ್ಕೆ ಹೋಲಿಕೆ, ಭಿನ್ನತೆಗಳ ಮರು ಅವಲೋಕನದ ಮೂಲಕ ಲಗತ್ತಿಸಿದರೆ ಹೊಸ ಮಾಹಿತಿಯು ಹಳೆಯದನ್ನೆ ಒಳಗೊಂಡು ಸುಲಭವಾಗಿ ನೆನಪಿನಲ್ಲಿ ಉಳಿಯುತ್ತದೆ.

ಈ ಪ್ರಕ್ರಿಯೆಗಳ ಮೂಲಕ ನೆನಪಿನಲ್ಲಿ ಉಳಿಯಬೇಕಾದರೆ ಕಲಿಕೆಯ ಮೂಲ ಅಗತ್ಯವನ್ನು ಸ್ಪಷ್ಟಪಡಿಸಿಕೊಳ್ಳಬೇಕು. ಕಲಿಕಾರ್ಥಿ; ಅಂದರೆ ವಿದ್ಯಾರ್ಥಿ, ಪೋಷಕರು ಮತ್ತು ಶಿಕ್ಷಕರು ಕಲಿಕೆಯ ಮೂಲ ಅಗತ್ಯಗಳಾಗಿರುತ್ತಾರೆ.  ಇವರೆಲ್ಲರಿಗೂ ಕಲಿಕೆಯಲ್ಲಿ ತಮ್ಮದೇ ಆದ ಪಾತ್ರವಿದೆ.
* ಪೋಷಕರು ಕಲಿಕೆಗೆ ಅಗತ್ಯವಾದ ಸಂಪನ್ಮೂಲ, ಸಂಸ್ಕಾರ ಮತ್ತು ಪ್ರೋತ್ಸಾಹವನ್ನು ನೀಡಬೇಕು.
* ವಿದ್ಯಾರ್ಥಿಗೆ ಕಲಿಕೆಗೆ ಅನುಕೂಲ ಮಾಡಿಕೊಡುವವರು ಶಿಕ್ಷಕರು. ಅಂದರೆ ವಿದ್ಯಾರ್ಥಿಯು ಕಲಿಕೆಗೆ ತೊಡಗಿದಾಗ ಉಂಟಾಗುವ ಕಲಿಕಾ ಅಡತಡೆಗಳನ್ನು ಶಿಕ್ಷಕರು ನಿವಾರಿಸಬೇಕು. ಅವರು ವಿದ್ಯಾರ್ಥಿಗೆ ಕಲಿಕೆಗೆ ಅನುಕೂಲ ಮಾಡಿಕೊಡುವುದರೊಂದಿಗೆ ಕಲಿತುಕೊಳ್ಳಲು ವಿದ್ಯಾರ್ಥಿಗೆ ಉತ್ತೇಜನವನ್ನು ನೀಡಬೇಕು. ಅಲ್ಲದೆ, ವಿದ್ಯಾರ್ಥಿಗಳಿಗೆ ಒಂದು ಆದರ್ಶವನ್ನು ಕಲ್ಪಿಸಿಕೊಡಬೇಕು. ಅದು ಕಲಿಕೆಗೆ ಬೇಕಾದ ಆದರ್ಶವೂ ಹೌದು. ಜೀವನದ ಆದರ್ಶವೂ ಹೌದು. ಮತ್ತು ಸ್ವತಃ ಶಿಕ್ಷಕರೇ ವಿದ್ಯಾರ್ಥಿಗಳಿಗೆ ಆದರ್ಶವಾಗುವುದೂ ಆಗಿದೆ. 

ಇವರೆಲ್ಲರಲ್ಲಿ ಬಹಳ ಮುಖ್ಯರಾದವರು ವಿದ್ಯಾರ್ಥಿಗಳು. ತಾನು ಕಲಿಯಬೇಕು ಎಂಬ ಇಚ್ಛಾಶಕ್ತಿ ವಿದ್ಯಾರ್ಥಿಗಳಿಗೆ ಇರಬೇಕು. ಅದಿಲ್ಲದೆ ಹೋದರೆ ಪೋಷಕರು ಮತ್ತು ಶಿಕ್ಷಕರು ಅಸಹಾಯಕರಾಗುತ್ತಾರೆ. ವಿದ್ಯಾರ್ಥಿಯು ಕಲಿತುಕೊಳ್ಳಲು ಹೊರಟಾಗ ಪೋಷಕರು ಮತ್ತು ಶಿಕ್ಷಕರು ಏನನ್ನಾದರೂ ಮಾಡಲು ಸಾಧ್ಯವಾಗುವುದು. ವಿದ್ಯಾರ್ಥಿಗಳು ತಮ್ಮನ್ನು ತಾವು ಸನ್ನದ್ಧಗೊಳಿಸಿಕೊಂಡ ನಂತರ ಕ್ರಮಿಸಬೇಕಾದ ಕಲಿಕಾ ಹಂತಗಳು ಹೀಗಿವೆ:

ಶ್ರವಣ: ಅಂದರೆ ಕೇಳಿಸಿಕೊಳ್ಳುವುದು.‌ ಕೇಳಿಸಿಕೊಳ್ಳುವುದು ತರಗತಿ ಕಲಿಕೆಯ ಪ್ರಾಥಮಿಕ ಹಂತವಾಗಿದೆ. ಕೇಳಿಸಿಕೊಳ್ಳಲಿಕ್ಕೇ ತಯಾರಿಲ್ಲದವರು ಮುಂದಿನ ಹಂತಕ್ಕೆ ಹೋಗುವುದು ಬಹಳ ಕಷ್ಟ. ಆದ್ದರಿಂದ ಪಾಠಗಳನ್ನು ಕೇಳಿಸಿಕೊಳ್ಳಬೇಕು.

ಪಠನ: ಅಂದರೆ ಓದುವುದು. ವ್ಯವಸ್ಥಿತ ಕಲಿಕೆಗಾದಾಗ ಕಥೆ, ಕಾದಂಬರಿಗಳನ್ನು ಓದುವ ಹಾಗೆ ಓದುವುದಲ್ಲ. ಪಠ್ಯದ ವಿಚಾರ, ಭಾವ, ಪರಿಕಲ್ಪನೆ, ಕ್ಲಿಷ್ಟ ವಿಷಯಗಳನ್ನು ಅರ್ಥ ಮಾಡಿಕೊಂಡು‌‌ ಓದಬೇಕು.

ಮನನ: ಅರ್ಥ ಮಾಡಿಕೊಂಡದ್ದನ್ನು‌ ಮನಸ್ಸಿಗೆ ಖಚಿತಪಡಿಸಿಕೊಳ್ಳುವುದು. ಈ ಹಂತದಲ್ಲಿ ಹೊರಗಿನಿಂದ ಬಂದ ವಿಷಯಗಳು ವಿದ್ಯಾರ್ಥಿಯದ್ದೇ ಆಗಿ " ಇದು ಹೀಗೀಗೆ" ಎಂಬ ಸ್ಪಷ್ಟ ರೂಪವನ್ನು ಧರಿಸಿ ವಿದ್ಯಾರ್ಥಿಯಲ್ಲಿ ಸೇರಿಕೊಳ್ಳಬೇಕು.

ನಿದಿಧ್ಯಾಸನ: ಮನಸ್ಸಿಗೆ ಖಚಿತವಾದದ್ದನ್ನು ಜಿಜ್ಞಾಸೆ ನಡೆಸಬೇಕು. " ಇದು ಹೀಗಲ್ಲದಿದ್ದರೆ ಬೇರೆ ಹೇಗೆ ಸಾಧ್ಯ?" ಎಂಬಂತಹ ಬಹುಮುಖಿ ಪ್ರಶ್ನೆಗಳನ್ನಿರಿಸಿಕೊಂಡು ತಾರ್ಕಿಕವಾಗಿ ವಿಚಾರ ಮಂಥನ ನಡೆಸಬೇಕು.

ಪುನರಾವರ್ತನೆ: ಜಿಜ್ಞಾಸೆಯ ನಂತರ ವಿದ್ಯಾರ್ಥಿಯಲ್ಲಿ ಆಂತರಿಕವಾಗಿ ದೃಢೀಕರಣವಾದದ್ದನ್ನು ಮತ್ತೊಮ್ಮೆ ಅಧ್ಯಯನ ಮಾಡಿ ಅಥವಾ ಗುಂಪಾಗಿ ಚರ್ಚೆ ನಡೆಸಿ ಅಥವಾ ಪ್ರಶ್ನೋತ್ತರಗಳನ್ನು ನಡೆಸುವ ಮೂಲಕ ಅಧ್ಯಯನ ನಡೆಸಿ ದೃಢೀಕರಿಸಿಕೊಳ್ಳಬೇಕು.

ಪುನರ್ಪ್ರತಿಷ್ಠಾಪನೆ: ಸ್ಪಷ್ಟವಾದದ್ದನ್ನು ಸರಳ ಟಿಪ್ಪಣಿಯಾಗಿ ಒಂದೆರಡು ಅಂಶಗಳಲ್ಲಿ ಬರೆದಿಡಬೇಕು. ಅಥವಾ ಮಾನಸಿಕ ಕ್ರಿಯೆಯಾಗಿ ಮನದೊಳಗೇ ಪಠ್ಯ ವಿಷಯಗಳನ್ನು ವಿದ್ಯಾರ್ಥಿಗಳದ್ದೇ ಆದ ಮಾತುಗಳಲ್ಲಿ ದೃಢಪಡಿಸಿರಿಸಿಕೊಳ್ಳಬೇಕು.

ನೆನಪಿರಿಸಿಕೊಳ್ಳಲು ಅಥವಾ ನೆನಪು ಶಕ್ತಿಯನ್ನು ಹೆಚ್ಚಿಸಲು ಯಾವ ಔಷಧಿಗಳೂ ಇಲ್ಲ. ಆದರೆ ಕಲಿಕೆಯನ್ನು ಸಮರ್ಪಕವಾಗಿ ನಡೆಸುವ ಮೂಲಕ, ಪರಿಣಾಮಕಾರಿಯಾದ ವಿಧಾನಗಳಿಂದ ಅಧ್ಯಯನ ನಡೆಸುವ ಮೂಲಕ ಕಲಿತದ್ದು ನೆನಪಿನಲ್ಲಿ ಉಳಿಯುವಂತೆ ಮಾಡಬಹುದು.‌ ಮೇಲೆ ಹೇಳಿದ ವಿಧಾನಗಳನ್ನು ಅಳವಡಿಸಿಕೊಳ್ಳುವ ದೃಢ ನಿರ್ಧಾರ ವಿದ್ಯಾರ್ಥಿಗಳಲ್ಲಿದ್ದರೆ ನೆನಪಿರಿಸಿಕೊಳ್ಳುವುದು ಕಷ್ಟವಾಗುವುದಿಲ್ಲ.

1.ಕಲಿಕೆಗೆ ಪೂರಕ ವಾತಾವರಣ ಮಕ್ಕಳಿಗೆ ಮನೆಯಲ್ಲಿ ದೊರೆಯಬೇಕು. ತಂದೆ- ತಾಯಿ ಸಂತೋಷವಾಗಿರುವುದು ಮಕ್ಕಳ ಕಲಿಕೆಗೆ ಉತ್ತೇಜನ ನೀಡುತ್ತದೆ.
2. ಮಕ್ಕಳ ಕಲಿಕೆಯ ಮೇಲ್ವಿಚಾರಣೆ ಇರಬೇಕು.‌ಆದರೆ ಅದು ಮಕ್ಕಳಲ್ಲಿ ಒತ್ತಡ ಸೃಷ್ಟಿಸಬಾರದು. ಉದಾಹರಣೆಗೆ,ಪಾಠದ ಯಾವುದಾದರೊಂದು ವಿಷಯವನ್ನು ಮಕ್ಕಳೊಂದಿಗೆ ಪ್ರಸ್ತಾಪಿಸಿ. ನಂತರ ಅವರು ಅದನ್ನು ವಿಸ್ತರಿಸಬೇಕು. ನಡುನಡುವೆ ಕಷ್ಟವಾದಾಗ ನೆನಪಿಸುವುದನ್ನಷ್ಟೆ ಹಿರಿಯರು ಮಾಡಬೇಕು.
3.ಮಕ್ಕಳನ್ನು ಚಟುವಟಿಕೆಯಲ್ಲಿರಿಸಬೇಕು.‌ದೈಹಿಕವೂ ಆಗಬಹುದು.‌ಮಾನಸಿಕವೂ ಇರಬಹುದು. ಒಟ್ಟಾರೆ ಚಟುವಟಿಕೆಯಲ್ಲಿರಬೇಕು.‌ 4.ಚಟುವಟಿಕೆಯ ಜೊತೆಗೆ ವಿಶ್ರಾಂತಿಯ ಅಗತ್ಯವೂ ಮಕ್ಕಳಿಗಿದೆ. ಅಲ್ಲದೆ ಕ್ರೀಡೆ, ವ್ಯಾಯಾಮದಂತಹ ದೈಹಿಕ ಚಟುವಟಿಕೆ ಮಕ್ಕಳ ಕಲಿಕೆಗೂ ಸಹಾಯಕವಾಗಿ ಬರುತ್ತದೆ. 
5. ಮಕ್ಕಳಿಗೆ ಬೇಕಾದ ಕಲಿಕಾ ಸಾಮಗ್ರಿಗಳನ್ನು ಕಾಲಕಾಲಕ್ಕೆ ಒದಗಿಸಬೇಕು.
 6. ಮಕ್ಕಳಲ್ಲಿ ಒಂದು ವಿಚಾರವನ್ನು ಧನಾತ್ಮಕವಾಗಿ ತೆಗೆದುಕೊಂಡು ಯೋಚಿಸುವ ಪ್ರವೃತ್ತಿಯನ್ನು ಬೆಳೆತಿಸಬೇಕು.
7.ಮಕ್ಕಳಿಗೆ ಭಾವನಾತ್ಮಕ ಬೆಂಬಲ ನೀಡಿ ಹತಾಶೆಗೆ ಹೋಗದಂತೆ ನೋಡಿಕೊಳ್ಳಬೇಕು.
8. ಮಕ್ಕಳಲ್ಲಿ ಆತ್ಮ ವಿಶ್ವಾಸವನ್ನು ಬೆಳೆಯಿಸಬೇಕು. 
9. ಮಕ್ಕಳ ತರಗತಿ, ಸ್ನೇಹಿತರು, ಭವಿಷ್ಯ ಮುಂತಾದವುಗಳ ಬಗ್ಗೆ ಚರ್ಚಿಸಬೇಕು.

ಕಲಿಕಾ ಅಡೆತಡೆಯ ಪರಿಕಲ್ಪನೆ: ಮಕ್ಕಳು ಕಲಿಕೆಗೆ ತೊಡಗಿಕೊಳ್ಳುತ್ತಾರೆ ಎನ್ನುವುದು ತತ್ವ. ಹೀಗೆ ತೊಡಗಿಕೊಂಡಾಗ ಅವರಿಗೆ ಭಾಷೆಯ ಅಡಚಣೆಯಾಗುತ್ತದೆ. ಆಗ ಭಾಷಾ ಪ್ರಯೋಗವನ್ನು ತಿಳಿಸಿ ಆ ಅಡಚಣೆಯನ್ನು ಶಿಕ್ಷಕರು ನಿವಾರಿಸಬೇಕು. ಓದಿಕೊಳ್ಳುವಾಗ ಕ್ಲಿಷ್ಟ ಪರಿಕಲ್ಪನೆಗಳು ಕಲಿಕಾ ಅಡಚಣೆಯಾಗಬಹುದು. ಆಗ ಕ್ಲಿಷ್ಟ ಪರಿಕಲ್ಪನೆಗಳನ್ನು ಉದಾಹರಣೆಯ ಮೂಲಕ ಸರಳೀಕರಿಸಿಕೊಟ್ಟು ಮಕ್ಕಳ ಕಲಿಕೆಯ ಸುಗಮಕಾರರಾಗಿ ಶಿಕ್ಷಕರು ಕಾರ್ಯ ನಿರ್ವಹಿಸಬೇಕು. ಮಕ್ಕಳಿಗೆ ಭಾವದ ಅಭಿವ್ಯಕ್ತಿ ಗೊತ್ತಾಗದಿರಬಹುದು. ಆಗ ಯಾವಾಗ ಯಾವ ಭಾವವನ್ನು ಹೇಗೆ ಅಭಿವ್ಯಕ್ತಿಪಡಿಸಬೇಕು ಎಂದು ಶಿಕ್ಷಕರು ತಿಳಿಸಿಕೊಡಬೇಕು. ಪ್ರಬಂಧ ಬರೆಯಲು ಮಕ್ಕಳಿಗೆ ಗೊತ್ತಾಗದಿರಬಹುದು. ಆಗ ಪ್ರಬಂಧ ಬರೆಯುವ ವಿಧಾನವನ್ನು ಶಿಕ್ಷಕರು ತಿಳಿಸಿಕೊಡಬೇಕು. ಹೀಗೆ ಕಲಿಕಾ ಅಡಚಣೆಯ ನಿವಾರಣೆಯು ವ್ಯಾಪಕ ಆಯಾಮಗಳನ್ನು ಹೊಂದಿದೆ.

ಎಸ್ ಎಸ್ ಎಲ್ ಸಿ ಮಕ್ಕಳು ನೆನಪಿರಿಸಿಕೊಳ್ಳಬಹುದಾದ ತಂತ್ರಗಳು:

1. ವಿಷಯಗಳ ಕೋಡ್ ವರ್ಡ್ ರಚನೆ ಮಾಡಿ ಅದನ್ನು ಡಿಕೋಡ್ ಮಾಡುವ ಸಮರ್ಪಕ ವಿಧಾನವನ್ನು ಬಳಸುವುದು. 
2. ಪಠ್ಯ ವಿಷಯಗಳನ್ನು ಪ್ರಶ್ನೋತ್ತರಗಳ ಸರಣಿಯ ರೀತಿಯಲ್ಲಿ ನೆನಪಿರಿಸಿಕೊಳ್ಳುವುದಯ.
3. ಓದಿದ ವಿಷಯಗಳನ್ನು ಟಿಪ್ಪಣಿಗಳಾಗಿ ಮಾಡಿ ನೆನಪಿರಿಸಿಕೊಳ್ಳುವುದು.4. ದೊಡ್ಡ ಪ್ರಶ್ನೆಗಳ ಹಲವು ಉಪಶೀರ್ಷಿಕೆಗಳ ಉತ್ತರಗಳನ್ನು ಅಭ್ಯಾಸ ಮಾಡಿ ಉಪಶೀರ್ಷಿಕೆಗಳ ಸರಣಿ ರಚಿಸುವುದು.
 5. ಮಕ್ಕಳೇ ಪ್ರಶ್ನೆಗಳನ್ನು ರಚಿಸುವುದು.‌ ಪ್ರಶ್ನೆ ತೆಗೆದಾಗ ಉತ್ತರ ಕೊಡುವ ಕೌಶಲ ತಾನಾಗಿಯೇ ಬರುತ್ತದೆ.
 6. ಉತ್ತರಗಳಿಗೆ ಬಹುಮುಖಿ ಉತ್ತರಗಳ ಪ್ರಶ್ನೆಗಳನ್ನು ಸೃಷ್ಟಿಸಿಕೊಂಡು ಚಿಂತನೆಯನ್ನು ನಡೆಸುವುದು. 
7. ಪಾಠದಲ್ಲಿ ಕಲಿತದ್ದನ್ನು ನಿತ್ಯ ಬದುಕಿಗೆ ಅನ್ವಯಿಸಿಕೊಂಡು ಅರ್ಥ ಮಾಡಿಕೊಳ್ಳುವುದು.
 8.ಪಠ್ಯ ವಸ್ತುವಿನ ಮೇಲೆ ಗುಂಪು ಚರ್ಚೆಗಳನ್ನು ನಡೆಸುವುದು.

Monday, 21 August 2023

PST ಯವರಿಗೆ ಹೈಸ್ಕೂಲ್ ಸಹಶಿಕ್ಷಕ ಹುದ್ದೆಗೆ ಬಡ್ತಿ ದೊರೆಯುತ್ತಾ? ಅಥವಾ ಜಿಪಿಟಿಯವರಿಗೆ ದೊರೆಯುತ್ತಾ?

*➖ಸರಕಾರಿ ಪ್ರೌಢಶಾಲಾ ಶಿಕ್ಷಕ ವೃಂದ& ನೇಮಕಾತಿಗೆ ಹೆಚ್ಚುವರಿ ನಿಯಮಗಳ ಸೇರ್ಪಡೆ ಕುರಿತು ಹಾಗೂ PST ಯವರಿಗೆ ಹೈಸ್ಕೂಲ್ ಸಹಶಿಕ್ಷಕ ಹುದ್ದೆಗೆ ಬಡ್ತಿ ದೊರೆಯುತ್ತಾ? ಅಥವಾ ಜಿಪಿಟಿಯವರಿಗೆ ದೊರೆಯುತ್ತಾ ಈ ಕುರಿತು ಸಚಿವಾಲಯದ ಪತ್ರ* 
👉🏿ಸಮಗ್ರ ಮಾಹಿತಿಗಾಗಿ 👇🏿👇🏿


ಚಂದ್ರನ ಅಂಗಳ ಸ್ಪರ್ಶಿಸಲು ಸಿದ್ಧವಾದ ಚಂದ್ರಯಾನ-3 ನೌಕೆ; ಆಗಸ್ಟ್ 23 ರಂದು ಇಸ್ರೋ ನೇರಪ್ರಸಾರ*


ಚಂದ್ರಯಾನ-3 ರ ನೌಕೆಯು ಚಂದ್ರನ ದಕ್ಷಿಣ ದ್ರುವದ ಮೇಲೆ ಇಳಿಯುವ ಅಪರೂಪದ ಕ್ಷಣವನ್ನು ಕಣ್ತುಂಬಿಕೊಳ್ಳಲು ಇಸ್ರೋ ಈ ಕೆಳಗಿನ ಲಿಂಕ್ ಗಳ ಮೂಲಕ ನೇರ ಪ್ರ ಸಾರ.    
ನೇರಪ್ರಸಾರದ ಲಿಂಕ್ ಗಳು ಹೀಗಿವೆ:
👉ISRO Website: https://www.isro.gov.in/
👉DD National TV

ಈ ಬಗ್ಗೆ ಇಸ್ರೋ ಟ್ವೀಟ್ ಮಾಡಿ, ತನ್ನ ಸಂದೇಶದಲ್ಲಿ ದೇಶದ ಜನರಿಗೆ ಈ ರೀತಿಯಾಗಿ ತಿಳಿಸಿದೆ:

ಇಸ್ರೋ ಸಂದೇಶ..

ಭಾರತದ ಬಾಹ್ಯಾಕಾಶ ಅನ್ವೇಷಣೆಯ ಅಭಿಯಾನವು ಚಂದ್ರಯಾನ-3 ಮಿಷನ್ನಿನೊಂದಿಗೆ ಒಂದು ಗಮನಾರ್ಹ ಮೈಲಿಗಲ್ಲು ತಲುಪಿದೆ, ಇದು ಚಂದ್ರನ ಮೇಲ್ಮೈಗೆ ಮೃದುವಾಗಿ ಇಳಿಯಲು ಸಿದ್ಧವಾಗಿದೆ. ಈ ಸಾಧನೆ ಭಾರತೀಯ ವಿಜ್ಞಾನ, ಎಂಜಿನಿಯರಿಂಗ್, ತಂತ್ರಜ್ಞಾನ ಮತ್ತು ಕೈಗಾರಿಕೆಗಾಗಿ ಗಮನಾರ್ಹ ಹೆಜ್ಜೆ, ನಮ್ಮ ರಾಷ್ಟ್ರದ ಬಾಹ್ಯಾಕಾಶ ಅನ್ವೇಷಣೆಯ ಪ್ರಗತಿಯನ್ನು ಸೂಚಿಸುತ್ತದೆ.

ಈ ಉತ್ಸುಕವಾಗಿ ನಿರೀಕ್ಷಿತ ಘಟನೆಯನ್ನು 2023 ರ ಆಗಸ್ಟ್ 23 ರಂದು 17:27 IST ರಿಂದ ಲೈವ್ ಪ್ರಸಾರ ಮಾಡಲಾಗುವುದು. ಲೈವ್ ಕವರೇಜ್ ನ್ನು ISRO ವೆಬ್‌ಸೈಟ್, YouTube, ISRO ರ Facebook ಪುಟ ಮತ್ತು DD ರಾಷ್ಟ್ರೀಯ ಟಿವಿ ಚಾನೆಲ್‌ಗಳಂತಹ ಹಲವಾರು ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿರುತ್ತದೆ.

ಚಂದ್ರಯಾನ-3 ರ ಮೃದು ಇಳಿಯುವಿಕೆಯು ಒಂದು ಮಹತ್ವದ ಕ್ಷಣವಾಗಿದ್ದು ಅದು ಕುತೂಹಲವನ್ನು ಹುಟ್ಟುಹಾಕುವುದಲ್ಲದೆ ನಮ್ಮ ಯುವಜನರ ಮನಸ್ಸಿನಲ್ಲಿ ಅನ್ವೇಷಣೆಯ ಉತ್ಸಾಹವನ್ನು ಉಂಟುಮಾಡುತ್ತದೆ. ಇದು ಭಾರತೀಯ ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರೌಢಿಮೆಯನ್ನು ನಾವು ಒಟ್ಟಾಗಿ ಆಚರಿಸುವಾಗ ಗಾಢ ಭಾವನೆಯ ಗೌರವ ಮತ್ತು ಏಕತೆಯನ್ನು ಉಂಟುಮಾಡುತ್ತದೆ. ಇದು ವೈಜ್ಞಾನಿಕ ವಿಚಾರಣೆ ಮತ್ತು ನವೀಕರಣದ ವಾತಾವರಣವನ್ನು ಬೆಳೆಸಲು ಕೊಡುಗೆ ನೀಡುತ್ತದೆ.

ಈ ನಿಟ್ಟಿನಲ್ಲಿ, ರಾಷ್ಟ್ರದಾದ್ಯಂತದ ಎಲ್ಲಾ ಶಾಲೆಗಳು ಮತ್ತು ಶೈಕ್ಷಣಿಕ ಸಂಸ್ಥೆಗಳನ್ನು ಈ ಐತಿಹಾಸಿಕ ಘಟನೆಯಲ್ಲಿ ಸಕ್ರಿಯ ಪಾತ್ರ ವಹಿಸಲು ಆಹ್ವಾನಿಸಲಾಗಿದೆ. ಸಂಸ್ಥೆಗಳನ್ನು ನಿಮ್ಮ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಿಗೆ ಈ ಘಟನೆಯನ್ನು ಸಕ್ರಿಯವಾಗಿ ಪ್ರಚಾರ ಮಾಡಲು ಮತ್ತು ಚಂದ್ರಯಾನ-3 ರ ಮೃದು ಇಳಿಯುವಿಕೆಯ ಲೈವ್ ಸ್ಟ್ರೀಮಿಂಗ್ ಅನ್ನು ಶಾಲಾ ಆವರಣದಲ್ಲಿ ಆಯೋಜಿಸಲು ತಿಳಿಸಿದೆ.

Monday, 17 July 2023

ಖಗೋಳವೆಂಬ ಕೌತುಕ ಮತ್ತು ಚಂದ್ರಯಾನ - 3.....


             ಜುಲೈ ‌14 2023 ಶುಕ್ರವಾರ ಅಂದರೆ ಇಂದು ಸಮಯ ಮಧ್ಯಾಹ್ನ ‌2/35 ಕ್ಕೆ ಸರಿಯಾಗಿ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಭೋಮಂಡಲಕ್ಕೆ ಉಡಾವಣೆಯಾಗಲಿದೆ ಭಾರತದ ಉಪಗ್ರಹ.....

ಎಲ್ಲವೂ ಸರಿಯಾದರೆ ಈಗಿನ ಯೋಜನೆಯಂತೆ ಆಗಸ್ಟ್ ‌23 ರಂದು ಚಂದ್ರನ ಮೇಲೆ ಇಳಿಯಲಿದೆ. ಅನೇಕ ಕುತೂಹಲಕಾರಿ ಮಾಹಿತಿಗಳನ್ನು ನೀಡಲಿದೆ......

ರಷ್ಯಾದ ಯೂರಿ ಗಗಾರಿನ್ ಎಂಬ ಮೊದಲ ಗಗನಯಾತ್ರಿ, ಚಂದ್ರನ ಮೇಲೆ  ಪಾದ ಸ್ಪರ್ಶ ಮಾಡಿದ ಮೊದಲ ಮಾನವ ಅಮೆರಿಕದ ನೀಲ್ ಆರ್ಮ್‌ಸ್ಟ್ರಾಂಗ್, ವೆಲೆಂಟೈನ ಟೆರೆಶ್ಕೋವ ಎಂಬ ಮೊದಲ ಮಹಿಳಾ ಗಗನಯಾತ್ರಿ, ಭಾರತದ ರಾಕೇಶ್ ಶರ್ಮಾ ಮತ್ತು ಅವರ ಸಹಾಯಕ ರವೀಶ್ ಮಲ್ಹೋತ್ರ ಎಂಬ ಭಾರತದ ಮೊದಲ ಗಗನಯಾತ್ರಿಗಳು, ಕಲ್ಪನಾ ಚಾವ್ಲಾ ಮತ್ತು ಸುನಿತಾ ವಿಲಿಯಂಸ್ ಎಂಬ ಭಾರತೀಯ ಮೂಲದ ಇಬ್ಬರು ಗಗನಯಾತ್ರಿಗಳು ಮತ್ತು ವಿಶ್ವದ ಇತರೆ ದೇಶಗಳ ಕೆಲವು ಗಗನಯಾತ್ರಿಗಳು, ಹಗಲು ರಾತ್ರಿ ಖಗೋಳ ನಿಗೂಢ ಬೇದಿಸಲು ನಿರಂತರ ಪ್ರಯತ್ನ ಮಾಡುತ್ತಿರುವ ಎಲ್ಲಾ ಖಗೋಳ ಶಾಸ್ತ್ರಜ್ಞರಿಗು ಕೃತಜ್ಞಾ ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತಾ..........

ಈ ನಿಟ್ಟಿನಲ್ಲಿ ಭಾರತದ ಹೆಮ್ಮೆಯ ಹೆಸರುಗಳಾದ ಆರ್ಯಭಟ ಮತ್ತು ವಿಕ್ರಮ್ ಸಾರಾಭಾಯಿ ಅವರನ್ನು ಸ್ಮರಿಸುತ್ತಾ.......

ಅರ್ಧ ಶತಮಾನಕ್ಕೂ ಹೆಚ್ಚು ಸಮಯವನ್ನು ಈ ಭೂಮಿಯ ಮೇಲೆ ಕಳೆದ ನನಗೆ ಈಗಲೂ ಬಾಹ್ಯಾಕಾಶ ಯಾತ್ರೆಯ ಬಗ್ಗೆ ಮಗುವಿನಷ್ಟು ಕುತೂಹಲ ಮುಗ್ದತೆ ಉಳಿದಿದೆ. ಮನೆಯ ಮಹಡಿಯ ಮೇಲೆ ನಿಂತು ಕೆಳಗೆ ನೋಡಲು ಭಯವಾಗುವ ಮನಸ್ಥಿತಿಯ ನಾವು, ವಿಮಾನದ ಹಾರಾಟವನ್ನೇ ಕುತೂಹಲದಿಂದ ವೀಕ್ಷಿಸುವ ನಾವು, ಅನಂತ ಆಗಸದಲ್ಲಿ ಮಿಂಚಿನ ವೇಗದಲ್ಲಿ ಪ್ರಯಾಣಿಸುವುದನ್ನು ಊಹಿಸಿಕೊಳ್ಳುವುದು ಕಷ್ಟ.....

ಭೂಮಿಯಿಂದ ಸುಮಾರು 385000 ( ಮೂರು ಲಕ್ಷ ಎಂಬತ್ತೈದು ಸಾವಿರ ) ಕಿಲೋಮೀಟರ್ ದೂರದಲ್ಲಿ ಇರುವ ಚಂದ್ರನಲ್ಲಿಗೆ ಮನುಷ್ಯನ ಪ್ರಯಾಣವೇ ಇರಬಹುದು ಅಥವಾ ಅಲ್ಲಿ ಕೆಲ ದಿನಗಳ ವಾಸವೇ ಇರಬಹುದು ಅಥವಾ ಮಾನವ ರಹಿತ ಸಂಶೋಧನಾ ಯಂತ್ರ ಕಳಿಸುವುದೇ ಇರಬಹುದು, ಮತ್ತು ‌ಅದನ್ನು ಇಲ್ಲಿನಿಂದಲೇ ನಿಯಂತ್ರಿಸುವುದು ಇರಬಹುದು, ಬಾಹ್ಯಾಕಾಶ ಕೇಂದ್ರದಲ್ಲಿ ಅಧ್ಯಯನ ಮಾಡುವುದೇ ಇರಬಹುದು ಎಲ್ಲವೂ ಸಾಮಾನ್ಯರ ಕಲ್ಪನೆಗೆ ಮೀರಿದ್ದು.....

ಎಲ್ಲಾ ಸೌಕರ್ಯಗಳ ನಡುವೆಯೂ ಒಂದು ವಾರದ ದೂರದ ಪ್ರವಾಸ ಅಥವಾ ಒಂದು ತಿಂಗಳ ವಿದೇಶ ಯಾತ್ರೆ ಅಥವಾ ಕೆಲವು ತಿಂಗಳ ಹೊರ ರಾಜ್ಯದ ತರಬೇತಿ ಅಥವಾ ಒಂದೆರಡು ವರ್ಷಗಳ ಶೈಕ್ಷಣಿಕ ಪ್ರವಾಸ ಇಷ್ಟಕ್ಕೇ ಸಾಕಷ್ಟು ಮಾನಸಿಕ ಒತ್ತಡಕ್ಕೆ ಒಳಗಾಗುವ ನಾವು ಯಾರ ನೇರ ಒಡನಾಟವಿಲ್ಲದೇ ಕೇವಲ ಧ್ವನಿ ಸಂಪರ್ಕ ಮಾತ್ರದೊಂದಿಗೆ ಲಕ್ಷಾಂತರ ಕಿಲೋಮೀಟರ್ ದೂರಕ್ಕೆ ಪ್ರಯಾಣಿಸಿ ಕೆಲ ಸಮಯ ಅಲ್ಲಿ ವಾಸಿಸುವ  ರೀತಿಯೇ ಕನಸಿನ ಲೋಕದಂತೆ ಭಾಸವಾಗುತ್ತದೆ. ತಂತ್ರಜ್ಞಾನ, ತರಬೇತಿ, ದೈಹಿಕ ಮತ್ತು ಮಾನಸಿಕ ಸಿದ್ದತೆ ಗಗನಯಾತ್ರಿಗಳಿಗೆ ಇರುತ್ತದೆ ಎಂಬುದು ನಿಜ. ಆದರೆ ಸಾಮಾನ್ಯ ಜನರಾದ ನಮಗೆ ಇದು ಒಂದು ವಿಸ್ಮಯ ಲೋಕ. ಅಲ್ಲಿನ‌ ಊಟ, ಸ್ನಾನ, ಆರೋಗ್ಯದ ವ್ಯತ್ಯಾಸ, ಒಂಟಿತನದ ಬೇಸರ, ಹಗಲು ರಾತ್ರಿಗಳು ಕಳೆಯುವ ರೀತಿ, ಅಲ್ಲಿನ ನೀರವತೆ, ಸಾವಿನ ಭಯ, ಪ್ರೀತಿ ಪಾತ್ರರ ನೆನಪು ಎಲ್ಲವನ್ನೂ ನಿಭಾಯಿಸುವ ರೀತಿ ನಿಜಕ್ಕೂ ಬಹುದೊಡ್ಡ ಸವಾಲು. ಏಕೆಂದರೆ ಅವರು ಸಹ ಮನುಷ್ಯರೇ ಅಲ್ಲವೇ....

ಬಾಹ್ಯಾಕಾಶ ಸಂಶೋಧನಾ ವಿಜ್ಞಾನದಲ್ಲಿ ಅಮೆರಿಕ ಮತ್ತು ರಷ್ಯಾ ಸಾಕಷ್ಟು ಅಭಿವೃದ್ಧಿ ಹೊಂದಿವೆ ಮತ್ತು ಅದರ ಮೇಲೆ ನಿಯಂತ್ರಣ ಸಾಧಿಸಿವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಚೀನಾ ಫ್ರಾನ್ಸ್ ಜರ್ಮನಿ ಮತ್ತು ಭಾರತ ಸಹಾ ಅತಿವೇಗದಲ್ಲಿ ತಮ್ಮ ಛಾಪು ಮೂಡಿಸುತ್ತಿವೆ......

ವಿಷಯ ಯಾವುದೇ ಇರಲಿ. ಆ ಬಗ್ಗೆ ಕನಿಷ್ಠ ಮಟ್ಟದ ಕುತೂಹಲ ಬೆಳೆಸಿಕೊಳ್ಳುವ ಮನೋಭಾವ ಇದ್ದರೆ ಅದು ನಮ್ಮ ಮಾನಸಿಕ ಬೆಳವಣಿಗೆಯ ದೃಷ್ಟಿಯಿಂದ ಉತ್ತಮ. ಬಹಳಷ್ಟು ಜನ ಕೆಲವು ವಿಷಯಗಳು ನಮಗೆ ಸಂಬಂಧಿಸಿಲ್ಲ ಎಂದು ನಿರ್ಲಕ್ಷ್ಯ ಮಾಡುತ್ತಾರೆ. ಅದು ಒಟ್ಟು ವ್ಯಕ್ತಿತ್ವ ವಿಶಾಲವಾಗದೆ ಸಂಕುಚಿತಗೊಳ್ಳಲು ಕಾರಣವಾಗಿದೆ. ನಮಗೆ ರಾಜಕೀಯ ಬೇಡ, ವಿಜ್ಞಾನ ಬೇಡ, ಕಲೆ ಸಾಹಿತ್ಯ ಸಂಗೀತ ಕ್ರೀಡೆ ಬೇಡ, ಆರ್ಥಿಕ ಚಟುವಟಿಕೆಗಳ ಮಾಹಿತಿ ಬೇಡ ಎಂದು ಅದರಿಂದ ದೂರವಿದ್ದು ಕೇವಲ ತಮ್ಮ ಹಣ ಸಂಪಾದನೆ, ತಮ್ಮ ಕುಟುಂಬ ಮತ್ತು ಅದರ ನಿರ್ವಹಣೆಯ ಸುತ್ತಲೇ ಇಡೀ ಜೀವನ ರೂಪಿಸಿಕೊಂಡಿರುವ ಪರಿಣಾಮವೇ ಇಂದು ನಾವುಗಳು ಅಲ್ಪಮತಿಗಳಾಗುತ್ತಿರುವುದು.....

ನಿಮ್ಮ ಪಂಚೇಂದ್ರಿಯಗಳನ್ನು ಸ್ವಲ್ಪ ಮುಕ್ತವಾಗಿಡಿ. ಸಾಧ್ಯವಿರುವ ಮತ್ತು ಆಸಕ್ತಿ ಇರುವ ವಿಷಯಗಳನ್ನು ಸ್ವಲ್ಪ ಒಳ ಸ್ಪರ್ಶಿಸಲು ಅನುವು ಮಾಡಿಕೊಡಿ. ಆ ಮ‌ೂಲಕ ಬದುಕಿನ ಕ್ವಾಲಿಟಿಯನ್ನು ಉತ್ತಮ ಗೊಳಿಸಿಕೊಳ್ಳಬಹುದು.....

ಜೊತೆಗೆ ಮಕ್ಕಳಿಗೆ ಈ ರೀತಿಯ ವಿಸ್ಮಯಕಾರಿ ವಿಷಯಗಳ ಬಗ್ಗೆ ಮಾಹಿತಿ ನೀಡುತ್ತಾ ಅವರ ಕುತೂಹಲ ಕೆರಳಿಸಿದರೆ ಖಂಡಿತ ಮುಂದಿನ ಭವಿಷ್ಯದಲ್ಲಿ ಅವರು ಯಾವುದಾದರೂ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡುವ ಸಾಧ್ಯತೆ ಇರುತ್ತದೆ. ಅನೇಕ ಹೊಸ ಹೊಸ ಸಂಶೋಧನೆಗಳು ರೂಪಗೊಂಡಿರುವುದೇ ಈ ರೀತಿಯ ಕುತೂಹಲಕಾರಿ ಪ್ರಶ್ನೆಗಳ ಮೂಲಕವೇ.
ರೇಡಿಯೋ, ರೈಲು, ವಿಮಾನ, ಮೊಬೈಲ್, ಟಿವಿ, ಕಂಪ್ಯೂಟರ್ ಮುಂತಾದ ಎಲ್ಲವೂ ಇದಕ್ಕೆ ಉದಾಹರಣೆಗಳು......

ನಾವು ಮಾಡಬೇಕಿರುವುದು ಮಕ್ಕಳಿಗೆ ಈ ಮಾಹಿತಿಗಳು ಸುಲಭವಾಗಿ ಸಿಗಬೇಕು ಮತ್ತು ಮನೆಗಳಲ್ಲಿ, ಶಾಲೆಗಳಲ್ಲಿ, ಗೆಳೆಯರ ಬಳಗದಲ್ಲಿ ಇದರ ಬಗ್ಗೆಯೇ ಚರ್ಚೆಗಳನ್ನು ಹುಟ್ಟು ಹಾಕಿ ಒಂದು ರೀತಿಯ ಸಾಂಸ್ಕೃತಿಕ ವಾತಾವರಣ ಸೃಷ್ಟಿ ಮಾಡಬೇಕು. ಆಗ ಹೆಚ್ಚು ಹೆಚ್ಚು ಉತ್ತಮ ಫಲಿತಾಂಶಗಳು ಬರುತ್ತವೆ........

ಟಿವಿ ಧಾರವಾಹಿಗಳನ್ನು, ಸಿನಿಮಾಗಳನ್ನು ವೀಕ್ಷಿಸುತ್ತಾ, ಅದರ ಬಗ್ಗೆಯೇ ಚರ್ಚಿಸುತ್ತಾ, ವಿಡಿಯೋ ಗೇಮ್ ಗಳಲ್ಲಿ ಅವರನ್ನು ಮುಳುಗಿಸುತ್ತಾ, ಅತಿಯಾದ ಹೋಂ ವರ್ಕ್ ಮತ್ತು ಅಂಕಗಳಲ್ಲಿಯೇ ಅವರನ್ನು ಬಂಧಿಸುತ್ತಾ, ಮನೆ ಕಾರು ಆಸ್ತಿಗಳನ್ನು ಮಾಡುವುದೇ ಜೀವನದ ಬಹುದೊಡ್ಡ ಗುರಿ ಎಂದು ಉಪದೇಶಿಸುತ್ತಾ ಇದ್ದರೆ ಖಂಡಿತ ಈಗ ನೋಡುತ್ತಿರುವ ಅಸಹಿಷ್ಣತಾ ಮತ್ತು ಹಿಂಸಾ ಸಮಾಜದ ನಿರ್ಮಾಣ ಇನ್ನಷ್ಟು ವೇಗ ಪಡೆಯುತ್ತದೆ.....

ಆದ್ದರಿಂದ ಇನ್ನು ಮುಂದಾದರು ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ದಿಕ್ಕಿನಲ್ಲಿ ಯೋಚಿಸೋಣ. ಮಾನವೀಯ ಮೌಲ್ಯಗಳ ಪುನರುತ್ಥಾನದ ಹಾದಿಯಲ್ಲಿ ಹೆಜ್ಜೆ ಇಡೋಣ. ಭಾರತದ ಚಂದ್ರ ಯಾನ - 3 ಎಂಬ ಇಸ್ರೋದ ಯೋಜನೆ ಯಶಸ್ವಿಯಾಗಲಿ ಎಂದು ಹಾರೈಸೋಣ. ಸಾಧ್ಯವಾದರೆ ಮಧ್ಯಾಹ್ನ ಇದನ್ನು ನೇರ ಪ್ರಸಾರದಲ್ಲಿ ವೀಕ್ಷಿಸೋಣ........

ಮಕ್ಕಳಲ್ಲಿ ಮುಂದೊಂದು ದಿನ ನಮ್ಮ ಕಲ್ಪನೆಯ " ಚಂದ ಮಾಮನಲ್ಲಿ " ವಾಸಿಸುವ ಕನಸು ಬಿತ್ತೋಣ........

ಪ್ರಬುದ್ಧ ಮನಸ್ಸು ಪ್ರಬುದ್ಧ ‌ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ - ಮನೆಗಳಲ್ಲಿ - ಮತಗಳಲ್ಲಿ - ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

Saturday, 8 July 2023

ಕ್ಷಮೆ ಅಂದರೇನು? ಒಂದು ಚರ್ಚೆ...

ಕ್ಷಮೆ

ಕ್ಷಮೆ ಅಂದರೇನು?  ನಾನು ಮತ್ತೊಬ್ಬರನ್ನು ಕ್ಷಮಿಸಿದ್ದೀನಿ ಅನ್ನೋ ಭಾವವೇ ಅಹಂಕಾರ ಜನ್ಯವಾದದ್ದು. "ಹೋಗು ಬಿಟ್ಟಿದ್ದೀನಿ, ಎಲ್ಲಾದರೂ ಬದುಕಿಕೊ" ಎಂಬ ಕಥೆ, ಸಿನಿಮಾಗಳಲ್ಲಿನ ಮಾತೇ ಮತ್ತೊಬ್ಬನಿಗೆ ಆಂತರ್ಯದಲ್ಲಿ ಅವಮಾನ‍ದ‍ ಅನುಭವ ಹುಟ್ಟಿಸುತ್ತೇನೋ!

ಪ್ರತಿ ನಿತ್ಯ ಯಾರಿಂದಲೋ ಬೇಸರ ಆಗುತ್ತೆ.  ನಾವೂ ಮತ್ತೊಬ್ಬರ ಬೇಸರಕ್ಕೆ ಕಾರಣ ಆಗಿರುತ್ತೇವೆ.  “ನಮ್ಮ ಬೇಸರಕ್ಕೆ ಮತ್ತೊಬ್ಬರು ಕಾರಣ ಎಂಬ ಭಾವವೇ ನಮ್ಮಲ್ಲಿ ಬರದಂತೆ ಅರಿವು ಮೂಡಿಸಿಕೊಳ್ಳುವುದು” ಕ್ಷಮೆಯ ಮೂಲತತ್ವ ಆಗಬೇಕೇನೋ. ನಾವು ಯಾವುದೋ ಕಾರಣಕ್ಕೆ ಕಿತ್ತಾಡಿ ಕೈಕುಲುಕಿ ಮಾಡಿಕೊಳ್ಳುವ compromise ಅನ್ನೋದು ಪೂರ್ತಿ ಕ್ಷಮೆಯ ಆಳವನ್ನು ಸ್ಪುರಿಸುವುದಿಲ್ಲ.    ಆ ವಿಚಾರವನ್ನು ಎರಡೂ ಪಕ್ಷದವರೂ  ಮತ್ತೊಬ್ಬರ ಬಳಿ ಹೋಗಿ, "ಹೀಗೆ ಹೀಗೆ ಆಯ್ತು ಹೋಕ್ಕೊಳ್ಳಿ ಅಂತ ಬಿಟ್ಟು ಬಿಟ್ಟೆ" ಎಂದು ಹೇಳಿಕೊಳ್ಳುತ್ತಾ  ಕಾಡಿನ ಬೆಂಕಿಯಂತಾ ವಿಸ್ತಾರ ಪಡೆಯುತ್ತಲೇ ಇರುತ್ತೆ.

ಕ್ಷಮೆಯ ಮೂಲ ತತ್ವಗಳು ಇಲ್ಲಿರಬಹುದೇನೋ:

1. ನಾನೂ ತಪ್ಪು ಮಾಡುವ ಸಾಧ್ಯತೆ ಇದೆ ಎಂಬ ಅರಿವು
2. ಒಂದು ಭಿನ್ನಾಭಿಪ್ರಾಯ ಬಂದಾಗ, ನಾವು ಚರ್ಚೆಯಲ್ಲಿ ಗೆಲುವು ಸಾಧಿಸುವುದರತ್ತ ಗಮನ ಹರಿಸದಿರುವುದು
3. ವಾದಗಳಲ್ಲಿ ಜಯದ ಅಪೇಕ್ಷೆ ಹೊಂದದಿರುವಾಗ ನಮ್ಮಲ್ಲಿ ಅಹಂ ಬದಲು ಮತ್ತೊಬ್ಬನನ್ನು ಕೇಳಿಸಿಕೊಳ್ಳುವ ಸೌಜನ್ಯ ನಿರ್ಮಾಣ ಆಗುತ್ತೆ
4. ಅಲ್ಲಿ ಸಮಾನ ಭಾವವಿರುತ್ತೆ, ಆಪ್ತತೆ ಹೆಚ್ಚಾಗುತ್ತೆ
 
ಇತ್ತೀಚೆಗೆ ಒಬ್ಬರ ಬಳಿ ಅಪ್ತ ಮಾತುಕತೆ ಸಂದರ್ಭದಲ್ಲಿ, ತಮಾಷೆ-ಆಪ್ತತೆಯ ಸೂಕ್ಷ್ಮತೆಗಳು ಸಡಿಲಾದ ಒಂದು ಕ್ಷಣ ಆ ವ್ಯಕ್ತಿಯಲ್ಲಿ ನನ್ನ ಕುರಿತು ಅಸಮಾಧಾನ ಹುಟ್ಟಿಸಿತು ಎಂದು ಅರಿವಿಗೆ ಬರಲಿಕ್ಕೆ ನನಗೆ ತಡವಾಗಲಿಲ್ಲ. ನಾನು ಅವರಿಗೆ ಹೃದಯಾಂತರಾಳದಿಂದ ಅಗತ್ಯವಾದ ಬೆಂಬಲ ನೀಡಿದ್ದೆ,  ಆದರೂ ಹೀಗೆ ಆಯ್ತಲ್ಲ ಎಂಬ ಹಲವು ಸಮ್ಮಿಶ್ರ ಭಾವಗಳು ಎದುರಾದವು. 

ನಮಗೆ ನೋವು ಎಂಬುದಾದಾಗ ನಿನ್ನೆ ಜೊತೆಯಾಗಿ ಸಿಹಿ ತಿಂದಿದ್ದೆವು ಎಂದು ನೆನಪಿರುತ್ತದೆ ಎನ್ನಲಿಕ್ಕಾಗುವುದಿಲ್ಲ.  ಹೀಗಾಗಿ ನಾವು ಕೊಟ್ಟ ಮತ್ತೊಂದು ಬೆಂಬಲ, ನಾವು  ಅವರ ಮನಸ್ಸಿನ ಮೇಲೆ ಹಾಕಿದ ಗೀರಿಗೆ ಸಮಜಾಯಿಷಿ ಆಗಬಾರದು.  ನನ್ನಿಂದ ಆದ  ಗೀರಿನ ದೆಸೆಯಿಂದ ಅವರಿಗೆ ನಮ್ಮಲ್ಲಿ ಮೊದಲಿನ ಆಪ್ತತೆ ಹಿಂದಿರುಗದಿದ್ದರೂ ಅಚ್ಚರಿಯಿಲ್ಲ.  'ಇದೇನು ಮಹಾ ನಾ ಮಾಡಿದ ತಪ್ಪು?' ಎಂದುಕೊಳ್ಳುವುದೇ ನನ್ನ ಅಹಂಕಾರ.  ಅವರು ನನ್ನ ಸ್ನೇಹಕ್ಕೆ ಹಿಂದಿರುಗದಿದ್ದರೂ, ಅವರೂ ಮನುಷ್ಯರು ಎಂಬ ಅರಿವು ನನ್ನಲ್ಲಿರುವುದು ಮುಖ್ಯ.  ಹೀಗಿದ್ದಾಗ ಮಾತ್ರಾ ಸಂಬಂಧಗಳ ಎಳೆಗಳ ಕುರಿತು ನನ್ನ ಅಂತರಂಗದಲ್ಲಿ ಒಂದು ಸ್ವಚ್ಛತೆ ಮೂಡೀತೇನೊ! ಆ ಸ್ವಚ್ಛತೆಯ ಆಳದೊಳಗೆ ನೆಲೆಸಿರುವುದು ಸಾಧ್ಯವಾದರೆ ಮಾತ್ರಾ  ಕ್ಷಮೆ ಎಂಬ ಅಂತಃಕರಣದ ಕಿಂಚಿತ್ ಅನುಭವವಾದರೂ  ಅಂತರಂಗದಲ್ಲಿ ಮೂಡಬಹುದೇನೊ.

ಒಂದು ಮಾತುಕತೆಯಲ್ಲಿ ಒಂದು ಅಭಿವ್ಯಕ್ತಿ  ನನ್ನಿಂದ ಮೂಡುವಲ್ಲಿ ಮತ್ತು ಇನ್ನೊಂದೆಡೆ ಅದು ಸ್ವೀಕೃತವಾಗುವಲ್ಲಿ ವೈಪರೀತ್ಯತೆ ಮೂಡಿ, ಮತ್ತೊಬ್ಬರು ನೀನು ಎಲ್ಲೆಡೆಯೂ ಹೀಗೇ ಎಂದಾಗ ಅಲುಗಾಡಿ ಹೋದೆ. ಅಹಂ ಚುಚ್ಚಲಿಲ್ಲ ಎನ್ನಲಾರೆ, ಹಲವು ಮಾನುಷೀಯ ಸಹಜ ಕೀಳರಿಮೆಗಳು ಚಿಗುರಿರಲಿಲ್ಲ ಎನ್ನಲಾರೆ.  ಆದರೆ ಅಂತಃಮಥನದಲ್ಲಿ ಈ ವ್ಯಕ್ತಿಯೇನೋ ಹೇಳಿದರು, ಹಾಗೆ ಹೇಳದೆ ಮನಸ್ಸಲ್ಲಿ ಉಳಿಸಿಕೊಂಡಿರುವವರು ಎಷ್ಟು ಜನವೊ ಎನಿಸಿದಾಗ, ಆ ವ್ಯಕ್ತಿ ನೀಡಿದ್ದು ನಿಜವಾದ ಬೆಳಕು ಅನಿಸಿತು. ಒಬ್ಬರು ಹೇಳುವುದು ಕಟುವಾಗಿದ್ದಾಗ ಅದರಲ್ಲಿ ಏನೋ ಮಹತ್ವದ್ದಿರಬಹುದು.  ಅವರು ಹಾಗೆಲ್ಲಾ ಹೇಳಿದರು; ಆದರೂ ಕ್ಷಮೆ ಹೊಂದಿದ್ದೇ ಎಂಬುದೇ ಹುಂಬತನ.  ಇಲ್ಲಿ ಕ್ಷಮೆ ಎಂಬ ಪದವೆಲ್ಲಿಯದು, ಯಾವುದೋ ಒಂದು ಮೂಲದ ಮೂಲಕ, ನಮಗೆ ಬೆಳಕು ಸಂದ ಕೃಪೆಯ ಕುರಿತು ನಮಗೆ ಇರಬೇಕಾದದ್ದು ನಮನಭಾವ.

Income Tax Refund: ಆದಾಯ ತೆರಿಗೆ ರಿಫಂಡ್ ವಿಳಂಬಕ್ಕೆ 8 ಕಾರಣಗಳೇನು? ಸಮಸ್ಯೆ ನಿವಾರಣೆಗೆ ಏನು ಮಾಡಬಹುದು? ಇಲ್ಲಿದೆ ಟಿಪ್ಸ್

Income Tax Refund: ಆದಾಯ ತೆರಿಗೆ ರಿಫಂಡ್ ವಿಳಂಬಕ್ಕೆ 8 ಕಾರಣಗಳೇನು? ಸಮಸ್ಯೆ ನಿವಾರಣೆಗೆ ಏನು ಮಾಡಬಹುದು? ಇಲ್ಲಿದೆ ಮಾಹಿತಿ. ಆದಾಯ ತೆರಿಗೆ ರಿಟರ್ನ್ ಸಲ್ಲಿಸುವುದು ...