✍️: ಕೊರೋನಾ ಭಾಗ-3 ಗಂಟಲನ್ನು ಹರ್ಬಲ್ ಆ್ಯಂಟಿ ವೈರಲ್ ಕಷಾಯದಿಂದ ತೊಳೆಯೋಣ, ಸೋಂಕನ್ನೇ ಸೀಲ್ ಡೌನ್ ಮಾಡೋಣ.*

Sunday, 12 October 2025

Income Tax Refund: ಆದಾಯ ತೆರಿಗೆ ರಿಫಂಡ್ ವಿಳಂಬಕ್ಕೆ 8 ಕಾರಣಗಳೇನು? ಸಮಸ್ಯೆ ನಿವಾರಣೆಗೆ ಏನು ಮಾಡಬಹುದು? ಇಲ್ಲಿದೆ ಟಿಪ್ಸ್


Income Tax Refund: ಆದಾಯ ತೆರಿಗೆ ರಿಫಂಡ್ ವಿಳಂಬಕ್ಕೆ 8 ಕಾರಣಗಳೇನು? ಸಮಸ್ಯೆ ನಿವಾರಣೆಗೆ ಏನು ಮಾಡಬಹುದು? ಇಲ್ಲಿದೆ ಮಾಹಿತಿ.



ಆದಾಯ ತೆರಿಗೆ ರಿಟರ್ನ್ ಸಲ್ಲಿಸುವುದು ಈಗ ತುಂಬ ಸುಲಭವಾಗಿದೆ. ಎಲ್ಲ ಪ್ರಕ್ರಿಯೆಗಳು ಕೂಡ ಆನ್‌ಲೈನ್‌ನಲ್ಲೇ ಮುಗಿಯುತ್ತವೆ. ಹಾಗಾಗಿ, ರಿಟರ್ನ್ ಸಲ್ಲಿಸಿದ ಬಳಿಕ ಎಲ್ಲ ದಾಖಲೆಗಳು ಸರಿಯಾಗಿದ್ದರೆ ಕೆಲವೇ ನಿಮಿಷಗಳಲ್ಲಿ ರಿಫಂಡ್ ಆಗುತ್ತದೆ. ಹೀಗಿದ್ದರೂ, ಕೆಲವೊಮ್ಮೆ ಆದಾಯ ತೆರಿಗೆ ರಿಫಂಡ್ ವಿಳಂಬವಾಗುತ್ತದೆ. ಹಾಗಾದರೆ, ರಿಫಂಡ್ ವಿಳಂಬವಾಗಲು ಕಾರಣಗಳೇನು? ರಿಫಂಡ್ ಸಲ್ಲಿಸಿದ ಬಳಿಕ ಏನೆಲ್ಲ ಮಾಡಬೇಕು? ಮುಂದೆ ಓದಿ.

ಚಾರ್ಟರ್ಡ್ ಅಕೌಂಟೆಂಟ್ ಲೆಕ್ಕಪುಸ್ತಕಗಳ ಆಡಿಟ್‌ಗಳು ಇಲ್ಲದವರಿಗೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಗಡುವು ಈಗಾಗಲೇ ಮುಗಿದಿದೆ. ದಾಖಲೆ ಪ್ರಮಾಣದಲ್ಲಿ ರಿಟರ್ನ್ ಸಲ್ಲಿಕೆಯಾಗಿರುವುದು ಆರೋಗ್ಯಕರವಾದ ಆರ್ಥಿಕ ವ್ಯವಸ್ಥೆಯನ್ನು ಸೂಚಿಸುತ್ತದೆ.

ನಿಮ್ಮ ಆದಾಯವು ತೆರಿಗೆ ವ್ಯಾಪ್ತಿಯಲ್ಲಿ ಇದ್ದರೆ ಆದಾಯ ತೆರಿಗೆಯನ್ನು ಮೂಲದಲ್ಲಿಯೇ ಹಿಡಿದು ಅಥವಾ ಮುಂಗಡವಾಗಿಯೇ?' ತೆರಿಗೆಯನ್ನು ಸರಕಾರದ ಖಾತೆಗೆ ಪಾವತಿಸಬೇಕು, ಆದಾಯ ಮತ್ತು ಅದರ ತೆರಿಗೆಯನ್ನು ಅಕ್ಕಹಾಕಿ ಬಾಕಿ ತೆರಿಗೆ ಪಾವತಿಸಬೇಕಾಗಿ ಬಂದಲ್ಲಿ ಅದನ್ನು ಪಾವತಿಸಿದ ನಂತರವೇ ರಿಟರ್ನ್ಸ್ ಸಲ್ಲಿಸಬೇಕು. ಎನ್ನುವುದು ನಿಯತು. ಕೆಲವು ಸನ್ನಿವೇಶಗಳಲ್ಲಿ ತೆರಿಗೆಯನ್ನು ಹೆಚ್ಚಾಗಿ ಪಾವತಿಸಿದ್ದರೆ ರಿಟರ್ನ್ಸ್ ಸಲ್ಲಿಸಿದ ಬಳಿಕ ಆದಾಯ ತೆರಿಗೆ ಇಲಾಖೆಯಿಂದ ತೆರಿಗೆ ರಿಫಂಡ್ (ತೆರಿಗೆ ಮರುಪಾವತಿ) ಪಡೆಯಬಹುದು.

ಇತ್ತೀಚಿನ ವರ್ಷಗಳಲ್ಲಿ ರಿಟರ್ನ್ ಸಲ್ಲಿಸುವುದು ತಂತಜ್ಞಾನದ ಅಳವಡಿಕೆಯಿಂದ ಆನ್ಲೈನ್ ಆಗಿರುವುದರಿಂದ ಸುಲಭವಾಗಿದೆ.

ತೆರಿಗೆ ಇಲಾಖೆಯಿಂದ ರಿಟರ್ನ್ಗಳು ವೇಗವಾಗಿ ಸಂಸ್ಕರಣೆಗೊಂಡು ತೆರಿಗೆ ರಿಫಂಡ್ (ತೆರಿಗೆ ಮರುಪಾವತಿ) ಹಲವು ಸಂದರ್ಭಗಳಲ್ಲಿ ಕೆಲವೇ ನಿಮಿಷಗಳಲ್ಲಿ ತೆರಿಗೆದಾರರ ಬ್ಯಾಂಕ್ ಖಾತೆಗೆ ಜಮಾ ಆಗಿರುವ ನಿದರ್ಶನಗಳಿವೆ. ಹೀಗಿದ್ದರೂ ಕೆಲವೊಮ್ಮೆ ತೆರಿಗೆ ರಿಫಂಡ್ ವಿಳಂಬವಾಗುವುದನ್ನು ಕೇಳಿದ್ದೇವೆ. ಇದಕ್ಕೆ ಹಲವು ಕಾರಣಗಳಿವೆ. 

1. ಪರಿಶೀಲನೆ (Verification) ಮರೆಯುವುದು:

ಹಿಂದಲ್ಲ ಪುಟಗಟ್ಟಲೇ ರಿಟರ್ನ್ ಸಲ್ಲಿಸುತ್ತಿದ್ದ ಕಾಲದಲ್ಲಿ ರಿಟರ್ನ್ ಬರೆದು ಕಡೆಯಲ್ಲಿ ರಿಟರ್ನ್(Verification) ಪರಿಶೀಲನೆ ಮಾಡಲು ತೆರಿಗೆದಾರರು ಸಹಿ ಮಾಡಿ,ರಿಟರ್ನ್ ದೃಢಿಕರಿಸಿ ಆದಾಯ ತೆರಿಗೆ ಕಚೇರಿಗೆ ಸಲ್ಲಿಸುತ್ತಿದ್ದರು.

ಆದ್ರೆ ಬದಲಾದ ಸನ್ನಿವೇಶದಲ್ಲಿ ಆನ್ಲೈನ್ ಮೂಲಕ ರಿಟರ್ನ್ ಸಲ್ಲಿಸುವ ಇಂದಿನ ಪರಿಸ್ಥಿತಿಯಲ್ಲಿ ಪರಿಶೀಲನೆಯು ಣುಕ ಮೂಲಕ ಆಗುತ್ತದೆ. ಈಗಿರುವ ನಿಯಮಾವಳಿಗಳ ಪ್ರಕಾರ ಆನ್ ಲೈನ್ ಮೂಲಕ ರಿಟರ್ನ್ ಸಲ್ಲಿಸಿದ 30 ದಿನಗಳೊಳಗೆ ಪರಿಶೀಲಿಸ ಬೇಕು. ಇಲ್ಲದಿದ್ದರೆ ಅಂತಹ ರಿಟರ್ನ್‌ಗಳನ್ನು ತೆರಿಗೆ ಇಲಾಖೆ ಸಂಸ್ಕರಿಸುವುದಿಲ್ಲ. ತೆರಿಗೆದಾರರು ರಿಟರ್ನ್ ಸಲ್ಲಿಸಿದ ಬಳಿಕ ಪರಿಶೀಲಿಸುವುದನ್ನು ನಿರ್ಲಕ್ಷಿಸುವುದರಿಂದ ಮರುಪಾವತಿಯು ಬ್ಯಾಂಕ್ ಖಾತೆಗೆ ಜಮಾ ಆಗದೆ ಇರುವುದಕ್ಕೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. 30 ದಿನಗಳೊಳಗೆ ಪರಿಶೀಲನಗೊಳ್ಳದ ರಿಟರ್ನ್ ಅಮಾನ್ಯವಾಗುವುದಲ್ಲದೆ, ರಿಟರ್ನ್ ಸಲ್ಲಿಸಿಯೇ ಇಲ್ಲವೆಂದು ನಿಯಮಾವಳಿಗಳ ಪ್ರಕಾರ ಪರಿಗಣಸಲಾಗುತ್ತದೆ.

2. ಸರಿಯಾದ ಬ್ಯಾಂಕ್ ಖಾತೆ ವಿವರ ನೀಡದಿರುವುದು:

ರಿಫಂಡ್ ಮೊತ್ತವು ಈಗ ನೇರವಾಗಿ ಬ್ಯಾಂಕ್ ಖಾತೆಗೆ ಜಮೆಯಾಗುವುದರಿಂದ ರಿಟರ್ನ್ ಸಲ್ಲಿಸುವಾಗ ಪ್ರೊಫೈಲ್ ನಲ್ಲಿ ಸರಿಯಾದ ಬ್ಯಾಂಕ್ ಖಾತೆಯ ವಿವರಗಳನ್ನು ನೀಡುವುದು ಕಡ್ಡಾಯ, ಬ್ಯಾಂಕ್ ಖಾತೆ ಸಂಖ್ಯೆ, IFSC ಸಂಖ್ಯೆ ಮತ್ತು ಬ್ಯಾಂಕ್‌ನ ಹೆಸರು ತಪ್ಪಾಗಿ ನಮೂದಿಸಿದ್ದರೆ ರಿಫಂಡ್ ಜಮೆಯಾಗುವುದಿಲ್ಲ ಈ ಪ್ರಕ್ರಿಯೆಯನ್ನು ಸುಗಮಗೊಳಿಸಲು ಅಮಾನ್ಯಗೊಂಡ ಬ್ಯಾಂಕ್ ಖಾತೆಯ ವಿವರಗಳನ್ನು ಸಲ್ಲಿಸಬಾರದು.

ಕೆಲವೊಮ್ಮೆ ಎರಡು ಬ್ಯಾಂಕ್ ವಿಲೀನಗೊಂಡಿದ್ದರೆ, ಹೊಸ ಖಾತೆಯ ವಿವರಗಳನ್ನು ಪ್ರೊಫೈಲ್ ನಲ್ಲಿ ನಮೂದಿಸುವುದು ಸೂಕ್ತ. ಇತ್ತೀಚಿನ ದಿನಗಳಲ್ಲಿ ಆದಾಯ ತೆರಿಗೆ ಇಲಾಖೆ ಪೂರ್ವ-ದೃಢಿಕರಿಸಿದ ಬ್ಯಾಂಕ್ ಖಾತೆಗೆ ಮಾತ್ರ ತೆರಿಗೆ ರಿಫಂಡ್ ಜಮೆ ಮಾಡಲಾಗುತ್ತದೆ. ನಿಮ್ಮ ಬ್ಯಾಂಕ್ ಹಾಳೆ ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಪೂರ್ವ-ದೃಢೀಕರಿಸಿವೆಯೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ನಿಮ್ಮ ಪ್ಯಾನ್ ಕಾರ್ಡ್ ಜತೆ ಜೋಡಣೆ ಯಾಗಿರಬೇಕು. ಅದರ ಸ್ಟೇಟಸ್ Validated ಎಂದು ಇರಬೇಕು. ಈ ಪ್ರಕ್ರಿಯೆ ಇಲ್ಲದಿದ್ದರೆ ರಿಫಂಡ್ ಜಮೆಯಾಗುವುದಿಲ್ಲ.

3. ತಾಳೆಯಾಗದ ಆದಾಯ ಮತ್ತು ತೆರಿಗೆ ಪಾವತಿ:

ರಿಟರ್ನ್ ಸಲ್ಲಿಸುವ ಪ್ರಮುಖ ಉದ್ದೇಶವೇ ಗಳಿಸಿರುವ ಆದಾಯ ಮತ್ತು ಅದರ ಮೇಲಿನ ತೆರಿಗೆ ಪಾವತಿಯ ವಿವರಗಳನ್ನು ದೃಡೀಕರಿಸಿ, ತೆರಿಗೆ ಪಾವತಿ ಆಥವಾ ರಿಫಂಡ್ ಪಡೆಯುವುದು.

ರಿಟರ್ನ್ ಸಲ್ಲಿಸುವುದಕ್ಕಿಂತ ಪೂರ್ವದಲ್ಲಿಯೇ ಫಾರ್ಮ್-26 AS Annual Information Statement (ಈ ಎರಡು ವಿವರಣಾ ಪಟ್ಟಿಯು ಆದಾಯ ತೆರಿಗೆ ಜಾಲತಾಣದ ನಮ್ಮ ಪ್ರೊಫೈಲ್‌ನಲ್ಲಿ ಇಡೀ ಹಣಕಾಸು ವರ್ಷದಲ್ಲಿ ನಾವು ಗಳಿಸಿರುವ, ಹೂಡಿಕೆ ಮಾಡಿರುವ ತೆರಿಗೆ ಪಾವತಿಮಾಡಿರುವ ವಿವರಗಳು ನಮ್ಮ ಪ್ಯಾನ್ ಸಂಖ್ಯೆಯ ಆಧಾರದ ಮೇಲೆ ದೊರೆಯುತ್ತದೆ) ಮತ್ತು ನಾವು ನಮೂದಿಸುತ್ತಿರುವ ವಿವರಗಳು ತಾಳೆ ಹೊಂದುತ್ತವೆಯೇ ಎಂಬುದನ್ನು ಖಚಿತಪಡಿಸಿಕೊಂಡ ಬಳಿಕವೇ ರಿಟರ್ನ್ ಸಲ್ಲಿಸಬೇಕು. ಒಂದು ಪಕ್ಷ ಈ ಮೂರು ತಾಳೆಯಾಗದಿದ್ದರೆ ತೆರಿಗೆ ರಿಫಂಡ್ ಖಾತೆಗೆ ಜಮೆಯಾಗದೆ ವಿಳಂಬವಾಗುವುದು.

4. ಹಿಂದಿನ ವರ್ಷಗಳ ಬಾಕಿ ತೆರಿಗೆ ಬೇಡಿಕೆಗಳು (Outstanding Tax Demands):

ಹಿಂದಿನ ಹಣಕಾಸು ವರ್ಷಗಳ ತೆಂಗೆ ಬೇಡಿಕೆಗಳು ಉಳಿದುಕೊಂಡಿದ್ದರೆ ಅಥವಾ ಬಾಕಿ ತೆರಿಗೆಗಳನ್ನು ಪಾವತಿಸದಿದ್ದರೆ ಈ ಸಂದರ್ಭಗಳಲ್ಲಿ ಪ್ರಸ್ತುತ ವರ್ಷದ ತೆರಿಗೆ ರಿಫಂಡ್‌ ನ್ನು ಬಾಕಿ ಇರುವ ಬೇಡಿಕೆ ಮೊತ್ತಗಳಿಗೆ ಹೊಂದಿಸಿಲಾಗುತ್ತದೆ. ಹೀಗೆ ಮಾಡಿದಾಗ, ಕಡಿಮೆ ತೆರಿಗೆ ರಿಫಂಡ್ ಜಮಾ ಆಗಬಹುದು ಅಥವಾ ಯಾವುದೇ ಮರುಪಾವತಿ ದೊರೆಯದಿರಬಹುದು.

5. ಸಲ್ಲಿಸಿದ ರಿಟರ್ನ್‌ಗಳಲ್ಲಿನ ಲೋಪದೋಷಗಳು:

ಆದಾಯವನ್ನು ಸರಿಯಾಗಿ ನಮೂದಿಸದಿದ್ದರೆ ಅಥವಾ ಸರಿಯಾದ ತೆರಿಗೆ ಕಡಿತಗಳನ್ನು (Deductions) ತೋರಿಸದಿದ್ದರೆ ಆದಾಯ ತೆರಿಗೆ ಇಲಾಖೆ ನಿಮ್ಮ ರಿಟರ್ನ್ ಅನ್ನು ಸಂಸ್ಕರಿಸುವಾಗ ಹೆಚ್ಚು ತೆರಿಗೆ ಬಾಕಿ ಇದೆ ಎಂದು ನಿರ್ಧರಿಸಬಹುದು. ಹೀಗಾಗಿ ನಿಮ್ಮ ಪ್ರಕಾರದ ತೆರಿಗೆ ರಿಫಂಡ್ ಜಮೆಯಾಗದೆ ಇರಬಹುದು.

6. ಕರನಿರ್ಧಾರಣ ಪ್ರಕ್ರಿಯೆಗೆ (Scrutiny) ಒಳಪಡುವುದು:

ಆದಾಯ ತೆರಿಗೆ ಇಲಾಖೆ ಕೆಲವೊಮ್ಮೆ ಕೆಲವು ರಿಟರ್ನ್‌ಗಳನ್ನು ಆಯ್ದುಕೊಂಡು ಕರನಿರ್ಧಾರಣ ಕ್ರಿಯೆಗೆ (ಟ್ಯಾಕ್ಸ್ ಅಸೆಸ್ ಮೆಂಟ್) ಒಳಪಡಿಸುತ್ತದೆ. ಇದು ಸಾಮಾನ್ಯವಾಗಿ ಹೆಚ್ಚಿನ ಮೊತ್ತದ ತೆರಿಗೆ ರಿಫಂಡ್‌ ಗಳು ಇದ್ದಾಗ ಅಥವಾ ಆದಾಯ ಮತ್ತು ಹೂಡಿಕೆಗಳಲ್ಲಿ ದೊಡ್ಡ ವ್ಯತ್ಯಾಸಗಳಿದ್ದಾಗ ಆಗುವ ಪ್ರಕ್ರಿಯೆ, ಪ್ರತಿವರ್ಷ ಆದಾಯ ತೆರಿಗೆ ಇಲಾಖೆ ಕರನಿರ್ಧಾರಣ ನಿಯಮಾವಳಿಗಳನ್ನು ರೂಪಿಸಿ ಯಾವುದೇ ರಿಟರ್ನ್ ಈ ನಿಯಮಾವಳಿಗಳ ಅಡಿಯಲ್ಲಿ ಬಂದರೆ, ರಿಟರ್ನ್ ಸಂಸ್ಕರಣೆ ಪ್ರಕ್ರಿಯೆಯಲ್ಲಿ ಸಾಕಷ್ಟು ಸಮಯ ಹಿಡಿಯುತ್ತದೆ. ಇದು ಪೂರ್ಣಗೊಂಡ ನಂತರದೇ ರಿಫಂಡ್ ಖಾತೆಗೆ ಜಮೆಯಾಗುತ್ತದೆ.

7. ದೊಡ್ಡ ಮೊತ್ತದ ತೆರಿಗೆ ರಿಫಂಡ್‌ ಗಳು:

ದೊಡ್ಡ ಮೊತ್ತದ ರಿಫಂಡ್‌ಗಳ ರಿಟರ್ನ್‌ಗಳನ್ನು ತೆರಿಗೆ ಇಲಾಖೆಯು ಪರಿಶೀಲಿಸುತ್ತದೆ. ಇಂತಹ ಪ್ರಕರಣದಲ್ಲಿ ಕರನಿರ್ಧಾರಣ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಕೈಗೊಳ್ಳುವ ಸಾಧ್ಯತೆ ಹೆಚ್ಚು ಹಾಗಾಗಿ, ಸಹಜವಾಗಿಯೇ ರಿಫಂಡ್ ಖಾತೆಗೆ ಜಮಾಗೊಳ್ಳಲು ವಿಳಂಬವಾಗಬಹುದು.

 8. ಐಟಿ ಜಾಲತಾಣದಲ್ಲಿನ ತಾಂತ್ರಿಕ ದೋಷಗಳು:

ತೆರಿಗೆ ಇಲಾಖೆಯ ಸಂಸ್ಕರಣಾ ವ್ಯವಸ್ಥೆಗಳಲ್ಲಿ ಕೆಲವೊಮ್ಮೆ ತಾಂತ್ರಿಕ ದೋಷಗಳು ಅಥವಾ ಸಿಸ್ಟಮ್ ದೋಷಗಳು ತೆರಿಗೆ ರಿಫಂಡ್ ವಿತರಣೆಯಲ್ಲಿ ವಿಳಂಬಕ್ಕೆ ಕಾರಣವಾಗಬಹುದು.

ಸಮಸ್ಯೆ ನಿವಾರಣೆಗೆ ಏನು ಮಾಡಬಹುದು?

▪️ಮೊದಲು ಸಮಸ್ಯೆ ಏನಾಗಿದೆ ಎಂದು ಅರಿಯಲು ರಿಟರ್ನ್ ಸಲ್ಲಿಸಿದ ಬಳಿಕ ಇ-ಮೇಲ್ ಮತ್ತು ಮೊಬೈಲ್ಗೆ ಆದಾಯ ತೆರಿಗೆ ಇಲಾಖೆಯಿಂದ ಮಾಹಿತಿ ಬಂದಿರುವುದನ್ನು ಗಮನಿಸಬೇಕು ಮತ್ತು ಆ ಮಾಹಿತಿ ಅನ್ವಯ ನಡೆದುಕೊಳ್ಳಬೇಕು.

▪️ಆದಾಯ ತೆರಿಗೆ ಇ-ಫೈಲಿಂಗ್ ಜಾಲತಾಣದಲ್ಲಿ ನಿಮ್ಮ ರಿಟರ್ನ್ ಸ್ಟೇಟಸ್‌ ನ್ನು ಕಾಲಕಾಲಕ್ಕೆ ಪರಿಶೀಲಿಸುತ್ತಿರಬೇಕು. ಬ್ಯಾಂಕ್ ಖಾತೆಯ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ ಮತ್ತು ಅಗತ್ಯವಿದ್ದರೆ ಮತ್ತೊಮ್ಮೆ ದೃಢೀಕರಿಸಬೇಕು.

▪️ಯಾವುದೇ ಬಾಕಿ ತೆರಿಗೆ ಬೇಡಿಕೆಗಳಿದ್ದರೆ, ಅವುಗಳನ್ನು ಪಾವತಿಸಿ ಅಥವಾ ಆದಾಯ ತೆರಿಗೆ ಇಲಾಖೆಗೆ ಪ್ರತಿಕ್ರಿಯೆ ನೀಡುವುದು ಸೂಕ್ತ. ಸಮಸ್ಯೆ ಬಗೆಹರಿಯದಿದ್ದರೆ, ಆದಾಯ ತೆರಿಗೆ ಇಲಾಖೆಯ ಅಧಿಕೃತ ಸಹಾಯವಾಣಿ ಸಂಪರ್ಕಿಸಿ.

Saturday, 15 March 2025

ನೆನಪಿಸಿಕೊಳ್ಳುವ ಹಂತಗಳ ವೈಜ್ಞಾನಿಕ ವಿಶ್ಲೇಷಣೆ......

ನೆನಪಿರಿಸಿಕೊಳ್ಳುವ ಹಂತಗಳು

" ಓದಿದ್ದು ನಿನ್ನೆ ಅಷ್ಟು ಚೆನ್ನಾಗಿ ನೆನಪಿತ್ತು. ಈಗ ನೆನಪಿಗೆ ಬರುತ್ತಿಲ್ಲ" ಎಂದು ಚಿಂತಿತರಾಗುವ ಹಲವು ವಿದ್ಯಾರ್ಥಿಗಳಿರುತ್ತಾರೆ. ಯಾಕೆ ಹೀಗಾಗುತ್ತದೆ ಎನ್ನುವುದು ಗೊತ್ತಾಗಬೇಕಾದರೆ ನೆನಪಿರಿಸಿಕೊಳ್ಳುವ ವೈಜ್ಞಾನಿಕ ಪ್ರಕ್ರಿಯೆ ಯಾವ ರೀತಿ ನಡೆಯುತ್ತದೆ ಎಂದು ತಿಳಿದುಕೊಳ್ಳಬೇಕು.

ನೆನಪಿರಿಸಿಕೊಳ್ಳುವ ವೈಜ್ಞಾನಿಕ ಪ್ರಕ್ರಿಯೆ:

* ನರವ್ಯೂಹದಲ್ಲಿ ಕೋಟ್ಯಂತರ ನರ ಕೋಶಗಳು ಇರುತ್ತವೆ.
* ನರ ಕೋಶಗಳು ಸಂಪರ್ಕ ತಂತುವಿನಿಂದ ಒಂದಕ್ಕೊಂದು ಬೆಸೆದುಕೊಂಡಿರುತ್ತವೆ.
* ಪ್ರತಿಯೊಂದು ವಿಷಯದ ಕುರಿತ ನಮ್ಮ ತಿಳಿವಳಿಕೆ ಒಂದು ಗಣದ ನರಕೋಶಗಳನ್ನು, ರಾಸಾಯನಿಕ ಸ್ರಾವದ ಮೂಲಕ ಉದ್ದೀಪಿಸುತ್ತದೆ.
* ಉದ್ದೀಪನ ಕ್ರಿಯೆಯು ತಾತ್ಕಾಲಿಕ ಮತ್ತು ದೀರ್ಘ ಕಾಲಿಕ ಎಂಬ ಎರಡು ಹಂತಗಳಲ್ಲಿ ನಡೆಯುತ್ತದೆ.
* ತಾತ್ಕಾಲಿಕ ಉದ್ದೀಪನವು ಬೇಗನೆ ಮರೆತು ಹೋಗುತ್ತದೆ. ತಾತ್ಕಾಲಿಕ ಉದ್ದೀಪನಕ್ಕೆ ಒಳಗಾದ ನರಕೋಶಗಳನ್ನು ಮತ್ತೆ ಮತ್ತೆ ಉದ್ದೀಪಿಸಿದಾಗ ದೀರ್ಘ ಕಾಲಿಕವಾಗಿ ನೆನಪಿನಲ್ಲಿ ದಾಖಲಾಗುತ್ತದೆ.
* ಕೆಲವೊಂದು ಪಠ್ಯ ವಿಷಯಗಳ ಕಂಠಪಾಠ, ಪುನರಾವರ್ತನೆ, ವಿಚಾರ ವಿನಿಮಯ, ವಿಚಾರ ಮಂಡನೆ, ಬೋಧನೆ, ಗುಂಪು ಚರ್ಚೆ, ವಿಚಾರ ಸಂಕಿರಣಗಳೆಲ್ಲವೂ ತಾತ್ಕಾಲಿಕ ಉದ್ದೀಪನವನ್ನು ಮತ್ತೆ ಮತ್ತೆ ಉದ್ದೀಪಿಸಿ ದೀರ್ಘಕಾಲಿಕವಾಗಿ ದಾಖಲಿಸುವ ಪ್ರಕ್ರಿಯೆಯಾಗಿದೆ.
* ಹೊಸ ಮಾಹಿತಿಯನ್ನು ಈಗಾಗಲೇ ಸ್ಥಾಪಿತವಾಗಿರುವ ನರಕೋಶಗಳ ಗಣಕ್ಕೆ ಹೋಲಿಕೆ, ಭಿನ್ನತೆಗಳ ಮರು ಅವಲೋಕನದ ಮೂಲಕ ಲಗತ್ತಿಸಿದರೆ ಹೊಸ ಮಾಹಿತಿಯು ಹಳೆಯದನ್ನೆ ಒಳಗೊಂಡು ಸುಲಭವಾಗಿ ನೆನಪಿನಲ್ಲಿ ಉಳಿಯುತ್ತದೆ.

ಈ ಪ್ರಕ್ರಿಯೆಗಳ ಮೂಲಕ ನೆನಪಿನಲ್ಲಿ ಉಳಿಯಬೇಕಾದರೆ ಕಲಿಕೆಯ ಮೂಲ ಅಗತ್ಯವನ್ನು ಸ್ಪಷ್ಟಪಡಿಸಿಕೊಳ್ಳಬೇಕು. ಕಲಿಕಾರ್ಥಿ; ಅಂದರೆ ವಿದ್ಯಾರ್ಥಿ, ಪೋಷಕರು ಮತ್ತು ಶಿಕ್ಷಕರು ಕಲಿಕೆಯ ಮೂಲ ಅಗತ್ಯಗಳಾಗಿರುತ್ತಾರೆ.  ಇವರೆಲ್ಲರಿಗೂ ಕಲಿಕೆಯಲ್ಲಿ ತಮ್ಮದೇ ಆದ ಪಾತ್ರವಿದೆ.
* ಪೋಷಕರು ಕಲಿಕೆಗೆ ಅಗತ್ಯವಾದ ಸಂಪನ್ಮೂಲ, ಸಂಸ್ಕಾರ ಮತ್ತು ಪ್ರೋತ್ಸಾಹವನ್ನು ನೀಡಬೇಕು.
* ವಿದ್ಯಾರ್ಥಿಗೆ ಕಲಿಕೆಗೆ ಅನುಕೂಲ ಮಾಡಿಕೊಡುವವರು ಶಿಕ್ಷಕರು. ಅಂದರೆ ವಿದ್ಯಾರ್ಥಿಯು ಕಲಿಕೆಗೆ ತೊಡಗಿದಾಗ ಉಂಟಾಗುವ ಕಲಿಕಾ ಅಡತಡೆಗಳನ್ನು ಶಿಕ್ಷಕರು ನಿವಾರಿಸಬೇಕು. ಅವರು ವಿದ್ಯಾರ್ಥಿಗೆ ಕಲಿಕೆಗೆ ಅನುಕೂಲ ಮಾಡಿಕೊಡುವುದರೊಂದಿಗೆ ಕಲಿತುಕೊಳ್ಳಲು ವಿದ್ಯಾರ್ಥಿಗೆ ಉತ್ತೇಜನವನ್ನು ನೀಡಬೇಕು. ಅಲ್ಲದೆ, ವಿದ್ಯಾರ್ಥಿಗಳಿಗೆ ಒಂದು ಆದರ್ಶವನ್ನು ಕಲ್ಪಿಸಿಕೊಡಬೇಕು. ಅದು ಕಲಿಕೆಗೆ ಬೇಕಾದ ಆದರ್ಶವೂ ಹೌದು. ಜೀವನದ ಆದರ್ಶವೂ ಹೌದು. ಮತ್ತು ಸ್ವತಃ ಶಿಕ್ಷಕರೇ ವಿದ್ಯಾರ್ಥಿಗಳಿಗೆ ಆದರ್ಶವಾಗುವುದೂ ಆಗಿದೆ. 

ಇವರೆಲ್ಲರಲ್ಲಿ ಬಹಳ ಮುಖ್ಯರಾದವರು ವಿದ್ಯಾರ್ಥಿಗಳು. ತಾನು ಕಲಿಯಬೇಕು ಎಂಬ ಇಚ್ಛಾಶಕ್ತಿ ವಿದ್ಯಾರ್ಥಿಗಳಿಗೆ ಇರಬೇಕು. ಅದಿಲ್ಲದೆ ಹೋದರೆ ಪೋಷಕರು ಮತ್ತು ಶಿಕ್ಷಕರು ಅಸಹಾಯಕರಾಗುತ್ತಾರೆ. ವಿದ್ಯಾರ್ಥಿಯು ಕಲಿತುಕೊಳ್ಳಲು ಹೊರಟಾಗ ಪೋಷಕರು ಮತ್ತು ಶಿಕ್ಷಕರು ಏನನ್ನಾದರೂ ಮಾಡಲು ಸಾಧ್ಯವಾಗುವುದು. ವಿದ್ಯಾರ್ಥಿಗಳು ತಮ್ಮನ್ನು ತಾವು ಸನ್ನದ್ಧಗೊಳಿಸಿಕೊಂಡ ನಂತರ ಕ್ರಮಿಸಬೇಕಾದ ಕಲಿಕಾ ಹಂತಗಳು ಹೀಗಿವೆ:

ಶ್ರವಣ: ಅಂದರೆ ಕೇಳಿಸಿಕೊಳ್ಳುವುದು.‌ ಕೇಳಿಸಿಕೊಳ್ಳುವುದು ತರಗತಿ ಕಲಿಕೆಯ ಪ್ರಾಥಮಿಕ ಹಂತವಾಗಿದೆ. ಕೇಳಿಸಿಕೊಳ್ಳಲಿಕ್ಕೇ ತಯಾರಿಲ್ಲದವರು ಮುಂದಿನ ಹಂತಕ್ಕೆ ಹೋಗುವುದು ಬಹಳ ಕಷ್ಟ. ಆದ್ದರಿಂದ ಪಾಠಗಳನ್ನು ಕೇಳಿಸಿಕೊಳ್ಳಬೇಕು.

ಪಠನ: ಅಂದರೆ ಓದುವುದು. ವ್ಯವಸ್ಥಿತ ಕಲಿಕೆಗಾದಾಗ ಕಥೆ, ಕಾದಂಬರಿಗಳನ್ನು ಓದುವ ಹಾಗೆ ಓದುವುದಲ್ಲ. ಪಠ್ಯದ ವಿಚಾರ, ಭಾವ, ಪರಿಕಲ್ಪನೆ, ಕ್ಲಿಷ್ಟ ವಿಷಯಗಳನ್ನು ಅರ್ಥ ಮಾಡಿಕೊಂಡು‌‌ ಓದಬೇಕು.

ಮನನ: ಅರ್ಥ ಮಾಡಿಕೊಂಡದ್ದನ್ನು‌ ಮನಸ್ಸಿಗೆ ಖಚಿತಪಡಿಸಿಕೊಳ್ಳುವುದು. ಈ ಹಂತದಲ್ಲಿ ಹೊರಗಿನಿಂದ ಬಂದ ವಿಷಯಗಳು ವಿದ್ಯಾರ್ಥಿಯದ್ದೇ ಆಗಿ " ಇದು ಹೀಗೀಗೆ" ಎಂಬ ಸ್ಪಷ್ಟ ರೂಪವನ್ನು ಧರಿಸಿ ವಿದ್ಯಾರ್ಥಿಯಲ್ಲಿ ಸೇರಿಕೊಳ್ಳಬೇಕು.

ನಿದಿಧ್ಯಾಸನ: ಮನಸ್ಸಿಗೆ ಖಚಿತವಾದದ್ದನ್ನು ಜಿಜ್ಞಾಸೆ ನಡೆಸಬೇಕು. " ಇದು ಹೀಗಲ್ಲದಿದ್ದರೆ ಬೇರೆ ಹೇಗೆ ಸಾಧ್ಯ?" ಎಂಬಂತಹ ಬಹುಮುಖಿ ಪ್ರಶ್ನೆಗಳನ್ನಿರಿಸಿಕೊಂಡು ತಾರ್ಕಿಕವಾಗಿ ವಿಚಾರ ಮಂಥನ ನಡೆಸಬೇಕು.

ಪುನರಾವರ್ತನೆ: ಜಿಜ್ಞಾಸೆಯ ನಂತರ ವಿದ್ಯಾರ್ಥಿಯಲ್ಲಿ ಆಂತರಿಕವಾಗಿ ದೃಢೀಕರಣವಾದದ್ದನ್ನು ಮತ್ತೊಮ್ಮೆ ಅಧ್ಯಯನ ಮಾಡಿ ಅಥವಾ ಗುಂಪಾಗಿ ಚರ್ಚೆ ನಡೆಸಿ ಅಥವಾ ಪ್ರಶ್ನೋತ್ತರಗಳನ್ನು ನಡೆಸುವ ಮೂಲಕ ಅಧ್ಯಯನ ನಡೆಸಿ ದೃಢೀಕರಿಸಿಕೊಳ್ಳಬೇಕು.

ಪುನರ್ಪ್ರತಿಷ್ಠಾಪನೆ: ಸ್ಪಷ್ಟವಾದದ್ದನ್ನು ಸರಳ ಟಿಪ್ಪಣಿಯಾಗಿ ಒಂದೆರಡು ಅಂಶಗಳಲ್ಲಿ ಬರೆದಿಡಬೇಕು. ಅಥವಾ ಮಾನಸಿಕ ಕ್ರಿಯೆಯಾಗಿ ಮನದೊಳಗೇ ಪಠ್ಯ ವಿಷಯಗಳನ್ನು ವಿದ್ಯಾರ್ಥಿಗಳದ್ದೇ ಆದ ಮಾತುಗಳಲ್ಲಿ ದೃಢಪಡಿಸಿರಿಸಿಕೊಳ್ಳಬೇಕು.

ನೆನಪಿರಿಸಿಕೊಳ್ಳಲು ಅಥವಾ ನೆನಪು ಶಕ್ತಿಯನ್ನು ಹೆಚ್ಚಿಸಲು ಯಾವ ಔಷಧಿಗಳೂ ಇಲ್ಲ. ಆದರೆ ಕಲಿಕೆಯನ್ನು ಸಮರ್ಪಕವಾಗಿ ನಡೆಸುವ ಮೂಲಕ, ಪರಿಣಾಮಕಾರಿಯಾದ ವಿಧಾನಗಳಿಂದ ಅಧ್ಯಯನ ನಡೆಸುವ ಮೂಲಕ ಕಲಿತದ್ದು ನೆನಪಿನಲ್ಲಿ ಉಳಿಯುವಂತೆ ಮಾಡಬಹುದು.‌ ಮೇಲೆ ಹೇಳಿದ ವಿಧಾನಗಳನ್ನು ಅಳವಡಿಸಿಕೊಳ್ಳುವ ದೃಢ ನಿರ್ಧಾರ ವಿದ್ಯಾರ್ಥಿಗಳಲ್ಲಿದ್ದರೆ ನೆನಪಿರಿಸಿಕೊಳ್ಳುವುದು ಕಷ್ಟವಾಗುವುದಿಲ್ಲ.

1.ಕಲಿಕೆಗೆ ಪೂರಕ ವಾತಾವರಣ ಮಕ್ಕಳಿಗೆ ಮನೆಯಲ್ಲಿ ದೊರೆಯಬೇಕು. ತಂದೆ- ತಾಯಿ ಸಂತೋಷವಾಗಿರುವುದು ಮಕ್ಕಳ ಕಲಿಕೆಗೆ ಉತ್ತೇಜನ ನೀಡುತ್ತದೆ.
2. ಮಕ್ಕಳ ಕಲಿಕೆಯ ಮೇಲ್ವಿಚಾರಣೆ ಇರಬೇಕು.‌ಆದರೆ ಅದು ಮಕ್ಕಳಲ್ಲಿ ಒತ್ತಡ ಸೃಷ್ಟಿಸಬಾರದು. ಉದಾಹರಣೆಗೆ,ಪಾಠದ ಯಾವುದಾದರೊಂದು ವಿಷಯವನ್ನು ಮಕ್ಕಳೊಂದಿಗೆ ಪ್ರಸ್ತಾಪಿಸಿ. ನಂತರ ಅವರು ಅದನ್ನು ವಿಸ್ತರಿಸಬೇಕು. ನಡುನಡುವೆ ಕಷ್ಟವಾದಾಗ ನೆನಪಿಸುವುದನ್ನಷ್ಟೆ ಹಿರಿಯರು ಮಾಡಬೇಕು.
3.ಮಕ್ಕಳನ್ನು ಚಟುವಟಿಕೆಯಲ್ಲಿರಿಸಬೇಕು.‌ದೈಹಿಕವೂ ಆಗಬಹುದು.‌ಮಾನಸಿಕವೂ ಇರಬಹುದು. ಒಟ್ಟಾರೆ ಚಟುವಟಿಕೆಯಲ್ಲಿರಬೇಕು.‌ 4.ಚಟುವಟಿಕೆಯ ಜೊತೆಗೆ ವಿಶ್ರಾಂತಿಯ ಅಗತ್ಯವೂ ಮಕ್ಕಳಿಗಿದೆ. ಅಲ್ಲದೆ ಕ್ರೀಡೆ, ವ್ಯಾಯಾಮದಂತಹ ದೈಹಿಕ ಚಟುವಟಿಕೆ ಮಕ್ಕಳ ಕಲಿಕೆಗೂ ಸಹಾಯಕವಾಗಿ ಬರುತ್ತದೆ. 
5. ಮಕ್ಕಳಿಗೆ ಬೇಕಾದ ಕಲಿಕಾ ಸಾಮಗ್ರಿಗಳನ್ನು ಕಾಲಕಾಲಕ್ಕೆ ಒದಗಿಸಬೇಕು.
 6. ಮಕ್ಕಳಲ್ಲಿ ಒಂದು ವಿಚಾರವನ್ನು ಧನಾತ್ಮಕವಾಗಿ ತೆಗೆದುಕೊಂಡು ಯೋಚಿಸುವ ಪ್ರವೃತ್ತಿಯನ್ನು ಬೆಳೆತಿಸಬೇಕು.
7.ಮಕ್ಕಳಿಗೆ ಭಾವನಾತ್ಮಕ ಬೆಂಬಲ ನೀಡಿ ಹತಾಶೆಗೆ ಹೋಗದಂತೆ ನೋಡಿಕೊಳ್ಳಬೇಕು.
8. ಮಕ್ಕಳಲ್ಲಿ ಆತ್ಮ ವಿಶ್ವಾಸವನ್ನು ಬೆಳೆಯಿಸಬೇಕು. 
9. ಮಕ್ಕಳ ತರಗತಿ, ಸ್ನೇಹಿತರು, ಭವಿಷ್ಯ ಮುಂತಾದವುಗಳ ಬಗ್ಗೆ ಚರ್ಚಿಸಬೇಕು.

ಕಲಿಕಾ ಅಡೆತಡೆಯ ಪರಿಕಲ್ಪನೆ: ಮಕ್ಕಳು ಕಲಿಕೆಗೆ ತೊಡಗಿಕೊಳ್ಳುತ್ತಾರೆ ಎನ್ನುವುದು ತತ್ವ. ಹೀಗೆ ತೊಡಗಿಕೊಂಡಾಗ ಅವರಿಗೆ ಭಾಷೆಯ ಅಡಚಣೆಯಾಗುತ್ತದೆ. ಆಗ ಭಾಷಾ ಪ್ರಯೋಗವನ್ನು ತಿಳಿಸಿ ಆ ಅಡಚಣೆಯನ್ನು ಶಿಕ್ಷಕರು ನಿವಾರಿಸಬೇಕು. ಓದಿಕೊಳ್ಳುವಾಗ ಕ್ಲಿಷ್ಟ ಪರಿಕಲ್ಪನೆಗಳು ಕಲಿಕಾ ಅಡಚಣೆಯಾಗಬಹುದು. ಆಗ ಕ್ಲಿಷ್ಟ ಪರಿಕಲ್ಪನೆಗಳನ್ನು ಉದಾಹರಣೆಯ ಮೂಲಕ ಸರಳೀಕರಿಸಿಕೊಟ್ಟು ಮಕ್ಕಳ ಕಲಿಕೆಯ ಸುಗಮಕಾರರಾಗಿ ಶಿಕ್ಷಕರು ಕಾರ್ಯ ನಿರ್ವಹಿಸಬೇಕು. ಮಕ್ಕಳಿಗೆ ಭಾವದ ಅಭಿವ್ಯಕ್ತಿ ಗೊತ್ತಾಗದಿರಬಹುದು. ಆಗ ಯಾವಾಗ ಯಾವ ಭಾವವನ್ನು ಹೇಗೆ ಅಭಿವ್ಯಕ್ತಿಪಡಿಸಬೇಕು ಎಂದು ಶಿಕ್ಷಕರು ತಿಳಿಸಿಕೊಡಬೇಕು. ಪ್ರಬಂಧ ಬರೆಯಲು ಮಕ್ಕಳಿಗೆ ಗೊತ್ತಾಗದಿರಬಹುದು. ಆಗ ಪ್ರಬಂಧ ಬರೆಯುವ ವಿಧಾನವನ್ನು ಶಿಕ್ಷಕರು ತಿಳಿಸಿಕೊಡಬೇಕು. ಹೀಗೆ ಕಲಿಕಾ ಅಡಚಣೆಯ ನಿವಾರಣೆಯು ವ್ಯಾಪಕ ಆಯಾಮಗಳನ್ನು ಹೊಂದಿದೆ.

ಎಸ್ ಎಸ್ ಎಲ್ ಸಿ ಮಕ್ಕಳು ನೆನಪಿರಿಸಿಕೊಳ್ಳಬಹುದಾದ ತಂತ್ರಗಳು:

1. ವಿಷಯಗಳ ಕೋಡ್ ವರ್ಡ್ ರಚನೆ ಮಾಡಿ ಅದನ್ನು ಡಿಕೋಡ್ ಮಾಡುವ ಸಮರ್ಪಕ ವಿಧಾನವನ್ನು ಬಳಸುವುದು. 
2. ಪಠ್ಯ ವಿಷಯಗಳನ್ನು ಪ್ರಶ್ನೋತ್ತರಗಳ ಸರಣಿಯ ರೀತಿಯಲ್ಲಿ ನೆನಪಿರಿಸಿಕೊಳ್ಳುವುದಯ.
3. ಓದಿದ ವಿಷಯಗಳನ್ನು ಟಿಪ್ಪಣಿಗಳಾಗಿ ಮಾಡಿ ನೆನಪಿರಿಸಿಕೊಳ್ಳುವುದು.4. ದೊಡ್ಡ ಪ್ರಶ್ನೆಗಳ ಹಲವು ಉಪಶೀರ್ಷಿಕೆಗಳ ಉತ್ತರಗಳನ್ನು ಅಭ್ಯಾಸ ಮಾಡಿ ಉಪಶೀರ್ಷಿಕೆಗಳ ಸರಣಿ ರಚಿಸುವುದು.
 5. ಮಕ್ಕಳೇ ಪ್ರಶ್ನೆಗಳನ್ನು ರಚಿಸುವುದು.‌ ಪ್ರಶ್ನೆ ತೆಗೆದಾಗ ಉತ್ತರ ಕೊಡುವ ಕೌಶಲ ತಾನಾಗಿಯೇ ಬರುತ್ತದೆ.
 6. ಉತ್ತರಗಳಿಗೆ ಬಹುಮುಖಿ ಉತ್ತರಗಳ ಪ್ರಶ್ನೆಗಳನ್ನು ಸೃಷ್ಟಿಸಿಕೊಂಡು ಚಿಂತನೆಯನ್ನು ನಡೆಸುವುದು. 
7. ಪಾಠದಲ್ಲಿ ಕಲಿತದ್ದನ್ನು ನಿತ್ಯ ಬದುಕಿಗೆ ಅನ್ವಯಿಸಿಕೊಂಡು ಅರ್ಥ ಮಾಡಿಕೊಳ್ಳುವುದು.
 8.ಪಠ್ಯ ವಸ್ತುವಿನ ಮೇಲೆ ಗುಂಪು ಚರ್ಚೆಗಳನ್ನು ನಡೆಸುವುದು.

Income Tax Refund: ಆದಾಯ ತೆರಿಗೆ ರಿಫಂಡ್ ವಿಳಂಬಕ್ಕೆ 8 ಕಾರಣಗಳೇನು? ಸಮಸ್ಯೆ ನಿವಾರಣೆಗೆ ಏನು ಮಾಡಬಹುದು? ಇಲ್ಲಿದೆ ಟಿಪ್ಸ್

Income Tax Refund: ಆದಾಯ ತೆರಿಗೆ ರಿಫಂಡ್ ವಿಳಂಬಕ್ಕೆ 8 ಕಾರಣಗಳೇನು? ಸಮಸ್ಯೆ ನಿವಾರಣೆಗೆ ಏನು ಮಾಡಬಹುದು? ಇಲ್ಲಿದೆ ಮಾಹಿತಿ. ಆದಾಯ ತೆರಿಗೆ ರಿಟರ್ನ್ ಸಲ್ಲಿಸುವುದು ...